Wednesday, August 30, 2006

ನಮ್ಮೆಲ್ಲರ ಪ್ರಿಯನಾದ ಗಣೇಶ

ಗಣೇಶನ ಹಬ್ಬ ಕಳೆದು ಇನ್ನೇನು ಪಕ್ಷವಾಗುತ್ತಾ ಬಂದಿತು. ಅವನ ಬಗ್ಗೆ ಈಗ ಬರೆಯಲು ಬಯಕೆ ಬಂದಿದೆ. ಆದರೆ ಗಣೇಶನ ಪೂಜೆ ಗಣೇಶನ ಹಬ್ಬದ ದಿನ ಮಾತ್ರ ಮಾಡುವುದಿಲ್ಲವಲ್ಲ? ನಾವು ನೋಡುವ ಹಾಗೆ ನಿತ್ಯವೂ ಗಣೇಶನ ದೇವಸ್ಥಾನಗಳಲ್ಲಿರುವ ಜನಜಂಗುಳಿ ಬೇರಾವ ದೇವಳಗಳಲ್ಲಿಯೂ ಇರುವುದಿಲ್ಲ. ಇಷ್ಟು ಜನಪ್ರಿಯನಾಗಿರುವ ಗಣೇಶನ ನೆನೆಸಿಕೊಳ್ಳಲೋಸುಗ ಇದನ್ನು ಬರೆಯಲು ಮೊದಲುಗೊಂಡಿರುವುದು. ಋಷಿಮೂಲ-ನದೀಮೂಲಗಳನ್ನು ಕೇಳಬಾರದೆನ್ನುತ್ತಾರೆ ಹಿರಿಯರು. ಈ ಪಟ್ಟಿಗೆ ದೇವರುಗಳನ್ನೂ ಧಾರಾಳವಾಗಿ ಸೇರಿಸಬಹುದು. ಆದರೂ ನನ್ನ ಗಣೇಶಾನ್ವೇಷಣೆ ಆ ರೀತಿಯದಲ್ಲ. ಪ್ರೀತಿಯಿಂದ ನನ್ನ ಮಿತ್ರನೊಬ್ಬನನ್ನು ಕುರಿತು ತಿಳಿಯುವ ಹಾಗಿರುವ ಹುಡುಕಾಟ.

ಹಿಂದಿನ ಕಾಲದಿಂದ ಗಣೇಶ ಕೃಷಿಕರ ದೇವತೆ ಎಂದು ಪ್ರಸಿದ್ಧಿ ಹೊಂದಿದವನು. ಆನೆಗಳು ಬಂದು ಬೆಳೆಯನ್ನು ಧ್ವಂಸ ಮಾಡುವ ಸಾಧ್ಯತೆ ಹೆಚ್ಚಿದ್ದ ಕಾಲವದು ಎಂದು ತೋರುತ್ತದೆ. ನಮ್ಮ ದೇಶ ತಲತಲಾಂತರಗಳಿಂದ ಕೃಷಿ ಪ್ರಧಾನವಾದ ದೇಶ. ಹಾಗೆ ನೋಡಿದರೆ ವೈದಿಕ ದೇವತೆಗಳಾದ ಇಂದ್ರ, ವರುಣ, ಸೂರ್ಯ ಮೊದಲಾದ ದೇವತೆಗಳೆಲ್ಲರೂ ಕೃಷಿಗೆ ತಮ್ಮಿಂದಾಗುವ ಪ್ರಯೋಜನದಿಂದಲೇ ಪೂಜನೀಯರೂ ಆದರು. ಗಣೇಶನ ಬಗ್ಗೆಯೂ ಹಾಗೆಯೇ ಆಗಿರಬೇಕು. ತೊಂದರೆಗಳನ್ನು ನಿವಾರಿಸಲು ಆನೆಯಲ್ಲೇ ವಿಘ್ನೇಶ್ವರನು ಕಂಡಿರಬೇಕು.

ತ್ರಯೀವೇದದಲ್ಲಿ (ಅಂದರೆ ಋಗ್ಯಜುಸ್ಸಾಮಗಳಲ್ಲಿ) ನಾವೀಗ ಕಾಣುವ ಚತುರ್ಭುಜನಾದ ಮೋದಕಪ್ರಿಯನಾದ ಶಿವ-ಗಿರಿಜೆಯರ ಪುತ್ರನಾದ ಗಣೇಶನು ಇಲ್ಲವೆಂದು ನನ್ನ ಭಾವನೆ (ಇದು ತಪ್ಪಾದರೆ ತಿದ್ದಿಕೊಳ್ಳಲು ಬಯಸುತ್ತೇನೆ). ಅರ್ವಾಚೀನವಾದ ಅಥರ್ವವೇದದಲ್ಲಿ ಗಣೇಶಾಥರ್ವಶೀರ್ಷೋಪನಿಷತ್ತು ಮುಂತಾದ ಭಾಗಗಳನ್ನು ಕಾಣಬಹುದು. "ಗಣಾನಾಂತ್ವಾ" ಅಥವಾ "ನಿಷುಸೀದ" ಎಂದು ಬರುವ ತ್ರಯೀವೇದದ ಮಂತ್ರಗಳು ಬಹುಶಃ ಬೃಹಸ್ಪತಿ ಅಥವಾ ಬ್ರಹ್ಮಣಸ್ಪತಿಯನ್ನುದ್ದೇಶಿಸಿದ್ದಾಗಿವೆ.

ಆದರೆ ವೇದದಲ್ಲಿರುವುದಕ್ಕೂ ಜನಪ್ರಿಯತೆಗೂ ಸಂಬಂಧವಿಲ್ಲವಷ್ಟೆ? ಪೌರಾಣಿಕ ದೇವತೆಗಳ ಕಲ್ಪನೆಗೂ ವೈದಿಕ ದೇವತೆಗಳ ಕಲ್ಪನೆಗೂ ಅಜಗಜಾಂತರದ ವ್ಯತ್ಯಾಸ. ಈಗ ಹೆಚ್ಚು ಪೂಜಿಸಲ್ಪಡುವ ದೇವತೆಗಳೆಂದರೆ ಶಿವ-ವಿಷ್ಣು-ಶಕ್ತಿ-ಗಣೇಶ-ಸುಬ್ರಹ್ಮಣ್ಯ ಮೊದಲಾದ ಪೌರಾಣಿಕ ದೇವತೆಗಳೇ! ಈಗ ಒಂದು ಪ್ರಶ್ನೆ ಏಳಬಹುದು. "ವೇದಗಳೇ ಪರಮಗ್ರಂಥಗಳಾದ ಹಿಂದುಗಳಿಗೆ ಪೌರಾಣಿಕದೇವತೆಗಳ ಪೂಜೆ ಸರಿಯಲ್ಲವಲ್ಲ?" ಎಂದು. ಆದರೆ ಈ ದೇವತೆಗಳ ಸ್ವರೂಪಗಳು ದೇವರಲ್ಲ ಎಂದು ಎಲ್ಲಿಯೂ ಹೇಳಿಲ್ಲವಲ್ಲ? "ಏಕಂ ಸದ್ವಿಪ್ರಾ ಬಹುಧಾ ವದಂತಿ, ಅಗ್ನಿಂ ಯಮಂ ಮಾತರಿಶ್ವಾನಮಾಹುಃ" ಎಂದು ವೇದವೇ ಹೇಳಿದೆಯಾದ್ದರಿಂದ ಜನಗಳಿಂದ ಪೂಜ್ಯವಾದ ಒಂದು ರೂಪವು ದೇವರೆಂದೆನಿಸಿಕೊಳ್ಳಲು ಕಷ್ಟವೇನಲ್ಲ. ಈಗ ಶಿರಡಿಯ ಸಾಇ (ಸಾಯಿ ಬಾಬಾ ಎಂದು ಕನ್ನಡಿಗರು ಬರೆಯದಿದ್ದರೆ ಒಳ್ಳೆಯದು) ಬಾಬಾರವರ ವೃತ್ತಾಂತವನ್ನೇ ತೆಗೆದುಕೊಳ್ಳೋಣ. ಎಲ್ಲೆಡೆ ದೇವರೆಂದೇ ಪೂಜೆಗೊಳ್ಳುವ ಬಾಬಾರವರು ಇನ್ನೂರು ವರ್ಷಗಳ ಹಿಂದೆ ಭೌತಿಕವಾಗಿ ಇರಲೇ ಇಲ್ಲ! ಈಗ ಅವರನ್ನು ಸಾಕ್ಷಾತ್ ದೇವರು ಎಂದು ಪರಿಗಣಿಸುವಷ್ಟು ನಮ್ಮ ಹಿಂದೂ ಧರ್ಮ ವಿಶಾಲವಾಗಿರುವಾಗ, ಪೌರಾಣಿಕದೇವತೆಗಳನ್ನು ಹೇಗೆ ತಾನೆ ಒಪ್ಪಿಕೊಳ್ಳದೆ ಇದ್ದೀತು? ಗಣೇಶನದು ಇತ್ತೀಚಿನ ಕಥೆಯಾಗದಿದ್ದರೂ ಒಂದಾನೊಂದು ಕಾಲದಲ್ಲಿ ಈ ರೀತಿ ಪೂಜೆಗೊಳ್ಳುತ್ತಿರಲಿಲ್ಲ ಎಂದು ಹೇಳಬಹುದು ಅಲ್ಲವೇ? ಗಣೇಶನು ಅನಾದಿಯಾದರೂ ಅವನ ಪೂಜೆಗೆ ಆರಂಭ ಇರಬೇಕಲ್ಲ?

ಸಾಯಣಾಚಾರ್ಯರು ತಮ್ಮ ವೇದಭಾಷ್ಯದ ಆರಂಭದಲ್ಲಿ -
"ವಾಗೀಶಾದ್ಯಾಃ ಸುಮನಸಃ ಸರ್ವಾರ್ಥಾನಾಮುಪಕ್ರಮೇ |
ಯಂ ನತ್ವಾ ಕೃತಕೃತ್ಯಾಃ ಸ್ಯುಸ್ತಂ ನಮಾಮಿ ಗಜಾನನಮ್ ||"
ಎಂದು ಗಣೇಶನನ್ನು ಸ್ತುತಿಸಿದ್ದಾರೆ. ಸಾಯಣರು ವಿದ್ಯಾರಣ್ಯರೆಂದು ಖ್ಯಾತರಾದ ಮಾಧಾವಾಚಾರ್ಯರ ಅಣ್ಣಂದಿರು. ಇವರು ಹದಿನಾರನೆಯ ಶತಮಾನದಲ್ಲಿದ್ದದ್ದು. ಅವರ ಸ್ತುತಿಯಿಂದ ತಿಳಿಯುವುದು ಗಣೇಶನ ಆಗಲೇ ಇದ್ದ ಜನಪ್ರಿಯತೆ ಮತ್ತು ಅವನೆಡೆ ಇದ್ದ ಭಕ್ತಿ.

ಅಷ್ಟೇ ಏಕೆ? ವೇದ ವ್ಯಾಸರ ಮಹಾಭಾರತಕ್ಕೆ ಲೇಖಕನಾಗಿದ್ದವನು ಗಣೇಶ. ಮಹಾಭಾರತದ ಲೇಖಕ ಗಣೇಶನೆಂಬ ಕಥೆ ಎಷ್ಟು ಹಳೆಯದೋ ತಿಳಿಯೆ. ಅದರೆ ಜನಮನ್ನಣೆಯನ್ನೇ ಅಲ್ಲ ಗಣೇಶ ಗಳಿಸಿದ್ದು. ಶಂಕರಾಚಾರ್ಯರೇ ಸ್ವತಃ ತಮ್ಮ ಗೀತಾಭಾಷ್ಯದಲ್ಲಿ "ಯಾಂತಿ ದೇವವ್ರತಾ ದೇವಾನ್ ಪಿತೄನ್ಯಾಂತಿ ಪಿತೃವ್ರತಾಃ" ಎಂಬ ಶ್ಲೋಕಕ್ಕೆ (೯-೨೫) ಭಾಷ್ಯ ಬರೆಯುತ್ತ "ವಿನಾಯಕಮಾತೃಗಣಚತುರ್ಭಗಿನ್ಯಾದೀನಿ" ಎಂದು ಭೂತಗಳ ಅಥವಾ ಕ್ಷುದ್ರಶಕ್ತಿಗಳ ಬಗ್ಗೆ ಇರುವ ಮಾತಿನಲ್ಲಿ ವಿನಾಯಕ ಅಥವಾ ಗಣೇಶನನ್ನು ಸೇರಿಸಿದ್ದಾರೆ. ವಿನಾಯಕನೂ ಕೂಡ ಒಂದು ಕ್ಷುದ್ರಶಕ್ತಿಯೋಪಾದಿಯಲ್ಲಿ ಪೂಜೆಗೊಳ್ಳುತ್ತಿದ್ದ ಎಂದು ತಿಳಿಯುತ್ತದೆ. ಇಂದು ಕೂಡ ವಾಮಾಚಾರದ ಪೂಜೆಯಲ್ಲಿ ಗಣೇಶನ ಪೂಜೆ ಮಾಡುತ್ತಾರಂತೆ. ಇದನ್ನು ಏಕೆ ಹೇಳಿದೆನೆಂದರೆ ಗಣೇಶನ ಈ ರೂಪವೂ ಇದೆ ಎಂದು ತೋರುವುದಕ್ಕೆ. ಈ ಉಗ್ರರೀತಿಯಿಂದ ಪೂಜೆಗೊಳ್ಳುವ ಗಣೇಶನನ್ನು ಬಿಟ್ಟು ನಮ್ಮೆಲ್ಲರ ಪ್ರಿಯನಾದ ಸೌಮ್ಯರೂಪನಾದ ಗಣೇಶನೆಡೆ ಮತ್ತೊಮ್ಮೆ ಬರೋಣ.

ಗಣೇಶನದು ಆಗಮಪ್ರಕಾರವೇ ಬಹಳಷ್ಟು ರೂಪಗಳಿರುತ್ತವೆ. ಶಕ್ತಿಗಣಪತಿ (ಮುತ್ತುಸ್ವಾಮಿ ದೀಕ್ಷಿತರು ಈ ಗಣೇಶರೂಪಗಳ ಬಗ್ಗೆ ಬಹಳ ಕೃತಿಗಳನ್ನು ರಚಿಸಿದ್ದಾರೆ), ವಲ್ಲಭಾಂಬಾ ಗಣಪತಿ, ಬಾಲಗಣಪತಿ, ಭಕ್ತಗಣಪತಿ, ನೃತ್ಯಗಣಪತಿ, ಮಹಾಗಣಪತಿ, ಉಚ್ಛಿಷ್ಟಗಣಪತಿ - ಹೀಗೆ ಬಹಳಷ್ಟು ರೂಪಗಳಿವೆ. ಸಾಮಾನ್ಯವಾಗಿ ಬ್ರಹ್ಮಚಾರಿಯೆಂದು ಪರಿಗಣಿಸಲ್ಪಡುವ ಗಣೇಶನಿಗೆ ಸಿದ್ಧಿಬುದ್ಧಿಯರೇ ಅಲ್ಲ, ವಲ್ಲಭಾಂಬೆ, ಲಕ್ಷ್ಮೀ (ನಾರಾಯಣಿಯಾದ ಲಕ್ಷ್ಮಿಯಲ್ಲದೇ ಬೇರೆಯವಳು ಈಕೆ), ಮುಂತಾದವರು ಪತ್ನಿಯರಾಗಿದ್ದಾರೆ.

ಶಿವನ ಮಗನಾದರೂ ತಂದೆಯನ್ನೂ ಮೀರಿಸಿದವ ಗಣಪತಿ. ಗಾಣಪತ್ಯರಿಗಂತೂ ಗಣೇಶನೇ ಅತ್ಯುಚ್ಚ ಪರಬ್ರಹ್ಮ ಸ್ವರೂಪ. ಶಂಕರಾಚಾರ್ಯರದೆಂದು ಖ್ಯಾತವಾದ ಸ್ತೋತ್ರದಲ್ಲಿ "ಅಜಂ ನಿರ್ವಿಕಲ್ಪಂ... ಅದ್ವೈತರೂಪಮ್" ಎಂದು ಸ್ತುತಿಸಿರುವುದು ಗಣೇಶನ ಈ ಅವಾಙ್ಮನಸಗೋಚರರೂಪವನ್ನೇ! ಅಥರ್ವಶೀರ್ಷದಲ್ಲೂ "ಪ್ರಕೃತೇಃ ಪುರುಷಾತ್ ಪರಮ್" ಎಂದು ಹೇಳಿದಾಗ - ಪ್ರಕೃತಿಪುರುಷರೆಂಬ (ಅಥವಾ ಜೀವ-ಜಗತ್ತೆಂಬ) ದ್ವೈತವನ್ನು ಮೀರಿದ ಪರಮಸತ್ಯ ಎಂದು ಗಣೇಶನನ್ನು ಸ್ತುತಿಸಿದೆ. ಅಥರ್ವಶೀರ್ಷದಲ್ಲಿ "ತ್ವಂ ಸಾಕ್ಷಾದಾತ್ಮಾಸಿ ನಿತ್ಯಮ್" ಎಂದು ಆತ್ಮಸ್ವರೂಪವೇ ಗಣೇಶನೆಂದು ಹೇಳಿದೆ.

ಈ ರೂಪಗಳಿದ್ದರೂ ಈಚೆಗೆ ನಮ್ಮವರು ಗಣೇಶಹಬ್ಬ ಬಂದದ್ದೇ ತಡ - ಅವನನ್ನು ಡೈನೋಸಾರ್ ಮೇಲೆ ಕೂಡಿಸುವುದು, ಸೂಟ್ ಹಾಕಿಸುವುದು, ಕನ್ನಡಕ ಹಾಕಿಸುವುದು, ಮುಂತಾದ ಆಧುನಿಕ (ಡೈನೋಸಾರ್ ಆಧುನಿಕವಲ್ಲದಿದ್ದರೂ ಜ್ಯುರಾಸಿಕ್ ಪಾರ್ಕ್ ಆಧುನಿಕ ತಾನೆ!) ವೇಷಗಳನ್ನು ಪಾಪ ಗಣೇಶನಿಗೆ ಹಾಕುತ್ತಾರೆ. ಇದೂ ಸಾಲದೆ ಬೃಹದಾಕಾರನಾದ ಅವನನ್ನು ಸಣ್ಣ ಇಲಿಯ ಮೇಲೆ ಕೂಡಿಸಿ ಅಲ್ಲಿಲ್ಲಿ ಬೀಳಿಸಿದ ಹಾಸ್ಯಚಿತ್ರಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆ. ಬ್ರಹ್ಮಾಂಡವನ್ನು ಉದರದಿ ಪೊರೆಯುವ ದೇವದೇವನಿಗೆ ಅಪಚಾರವೇ? ಹಾಗೆ ಅಪಚಾರ ಮಾಡಿದವರ ಮೇಲೆ ಕೋಪವೂ ಬರುತ್ತದೆ. ಆದರೆ ಇನ್ನೊಂದು ಕಡೆಯಿಂದ ನೋಡಿದರೆ ಇದು ನಮ್ಮ ದೇವರ ದೊಡ್ಡತನವೇ ಎಂದು ಕಾಣುತ್ತದೆ. ಭಕ್ತರಿಂದ ಇಷ್ಟೆಲ್ಲ ಮಾಡಿಸಿಕೊಂಡರೂ ಅವರಿಗೇ ಒಲಿಯುವ ಭಕ್ತಪರಾಧೀನ ನಮ್ಮ ಗಣಪ ! ಅವನು ನಮಗೆ ಎಂಥ ಸ್ನೇಹಿತನಲ್ಲವೇ? ಆದರೂ ಸ್ನೇಹಿತನೆಂದು ಬಹಳ ಹಿಂಸಿಸುವುದು ಒಳ್ಳೆಯದಲ್ಲ. ಆದರೂ ಇಲ್ಲಸಲ್ಲದ ಉಡುಪುಗಳನ್ನು ಗಣೇಶನಿಗೆ ತೊಡಿಸಿದಾಗ ನನಗೆ ಬೇಜಾರಾಗದೆ ಇರುವುದಿಲ್ಲ.

ಮತಾಂಧತೆ ತಾಂಡವವಾಡುತ್ತಿರುವ ಈ ಕಾಲದಲ್ಲಿ ಗಣೇಶ ನಮಗೆ ಒಳ್ಳೆಯ ಪಾಠ ಕಲಿಸಿದ್ದಾನೆ. ಇದೇ ರೀತಿಯ ಹಾಸ್ಯ ಮುಸ್ಲಿಮರ ಅಥವಾ ಕ್ರಿಶ್ಚಿಯನ್ನರ ದೇವತೆಗಳಿಗೆ ಮಾಡಿದ್ದರೆ? ಮೊನ್ನೆ ತಾನೆ ಡೆನ್ಮಾರ್ಕಿನಲ್ಲಿ ನಡೆದ ಸಂಗತಿಯ ಪುನರಾವೃತ್ತಿಯಾಗುತ್ತಿತ್ತು. ಹಿಂದು ಧರ್ಮವು ಅವುಗಳಿಗಿಂತ ಸಹಿಷ್ಣು ಎಂದು ಗಣೇಶ ನಿರೂಪಿಸಿದ್ದಾನೆ.

ಭಕ್ತಿಯ ಒಂದು ಸ್ನೇಹದಲ್ಲಿ ಸ್ವಲ್ಪ ಅಪಚಾರ ಮಾಡಿದರೆ ತೊಂದರೆ ಇಲ್ಲ. ಈಗ ಕೃಷ್ಣನಿಗೆ ವಿದುರ ಭಕ್ತಿಭಾವದಲ್ಲಿ ಬಾಳೆಯ ಹಣ್ಣನ್ನು ಕೊಡುವ ಬದಲು ಸಿಪ್ಪೆಯನ್ನು ಕೊಡಲಿಲ್ಲವೇ? ಆದರೆ ಗಣೇಶನ ಬಗ್ಗೆ ಕೆಟ್ಟದಾಗಿ ಕೆಲವು ಆಧುನಿಕ ವಿದ್ವಾಂಸರು ಹೇಳುತ್ತಿದ್ದಾರೆ. ಪಾಲ್ ಕೋರ್‍ಟ್ರೈಟ್ ಎಂಬುವನು ಗಣೇಶನನ್ನು "psycho-analyze" ಮಾಡುವೆ ಹೇಯ ಪ್ರಯತ್ನ ಮಾಡಿರುತ್ತಾನೆ. ಇದು ಎರಡು ವರ್ಷಗಳ ಹಿಂದೆ ದೊಡ್ಡ ರಾದ್ಧಾಂತವನ್ನೇ ಮಾಡಿತ್ತು. ಅದರಲ್ಲಿ ಮುದ್ದಾದ ಗಣೇಶನ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಬರೆದಿರುತ್ತಾರೆ. ಇಲ್ಲಿ ಬರೆಯಲಾಗದಷ್ಟು ಅಶ್ಲೀಲ ಸಂಗತಿಗಳನ್ನು ಸೇರಿಸಿದ್ದಾರೆ. ಈ ಪುಸ್ತಕದಿಂದ ಖೇದಗೊಂಡ ಭಕ್ತರು ಆ ಪುಸ್ತಕದ ಮುದ್ರಣವನ್ನು ಸ್ಥಗಿತಗೊಳಿಸಿದರು. (ನಾನು ಪುಸ್ತಕ ban ವಾದಿಯಲ್ಲ, ಆದರೆ ಈ ರೀತಿಯ ಅಸಹ್ಯವಾದ ಬರವಣಿಗಳನ್ನು ಖಂಡಿಸಲೇಬೇಕು) ಸತ್ಯವಿದ್ದಿದ್ದರೆ ಸರಿ ಎನ್ನಬಹುದಿತ್ತು. ಆದರೆ ವಸ್ತುತಃ ಆ ಪುಸ್ತಕದಲ್ಲಿರುವ ಸತ್ಯಾಂಶ ಕಡಿಮೆ. ಪಾಲ್ ಮಹಾಶಯ ಉಪಯೋಗಿಸಿದ ಕ್ರಮವೂ ತಪ್ಪು. ಅವನ ವಿದ್ವತ್ತೂ ಸರಿಯಿಲ್ಲ ಎಂದು ಕೊಂಡಿಯಲ್ಲಿ ಸಿಗುವ ದೀರ್ಘಲೇಖನದಲ್ಲಿ ಚೆನ್ನಾಗಿ ನಿರೂಪಿಸಿರುತ್ತಾರೆ ವಿಶಾಲ್ ಅಗರ್ವಾಲ್ ಮತ್ತು ಕಲವೈ ವೆಂಕಟ್ ಎಂಬುವರು.

ಹೀಗೆ ಗಣೇಶನಿಂದ - ಯಾವ ಸಂದರ್ಭದಲ್ಲಿ ಸಹಿಷ್ಣುವಾಗಿರಬೇಕು, ಯಾವ ಸಂದರ್ಭದಲ್ಲಿ ಹೋರಾಡಬೇಕು ಎಂಬ ಇನ್ನೊಂದು ಪಾಠವೂ ಆಗಿದೆ.

ಗಣೇಶಚತುರ್ಥಿಯು ಕೇವಲ ಭಕ್ತಿಭರಿತ ವ್ರತವಾಗಿರದೆ ಸಾಮಾಜಿಕ ಐಕ್ಯಕ್ಕೆ ಸಾಧನವಾಗಿ ಕೂಡ ಬಳಸಿಕೊಳ್ಳಬಹುದೆಂದು ಲೋಕಮಾನ್ಯ ಬಾಲಗಂಗಾಧರ ಟಿಳಕರು ನಿರೂಪಿಸಿದ್ದಾರೆ. ಇವರ ಈ ಪ್ರಯತ್ನವೇ ಈಗ ರಸ್ತೆ ರಸ್ತೆಗಳಲ್ಲಿ ಸಿಗುವ ಗಣೇಶ ಮಿತ್ರ ಮಂಡಲಿಗಳಿಗೆ ಕಾರಣ. ಅಂದು ಮನೆಮನೆಗಳಲ್ಲಿ ವರ್ಣಮಯ ಗೌರೀ-ಗಣೇಶರ ಮೂರ್ತಿಗಳು ಕಂಗೊಳಿಸುತ್ತಿರುತ್ತವೆ. ಮೋದಕ, ಕಡುಬುಗಳು ಮುಂತಾದ ಸಿಹಿತಿನಿಸುಗಳನ್ನು ವಿನಾಯಕನಿಗೆ ನಿವೇದಿಸಿ ಭಕ್ತಿಯಿಂದ ಪೂಜೆ ನೆರವೇರುತ್ತದೆ. ಮನೆಗ ಬಂದ ತಾಯಿ-ಮಗನ ಹಾಗೆ ಭಕ್ತರ ಪೂಜಾತಿಥ್ಯಗಳನ್ನು ಸ್ವೀಕರಿಸುತ್ತಾರೆ. ಪ್ರತಿಯೊಂದು ಮನೆಯ ಆತ್ಮೀಯ ಸದಸ್ಯರೇ ಆಗುತ್ತಾರೆ. ಅವರ ಮೃಣ್ಮಯ ಮೂರ್ತಿಗಳನ್ನು ನೀರಿನಲ್ಲಿ ಬಿಡುವಾಗ ಭಕ್ತರಿಗೆಲ್ಲ ದುಃಖ. ನಮ್ಮ ಆತ್ಮೀಯರನ್ನು ಬೀಳ್ಕೊಡುವಾಗ ಆಗುವ ದುಃಖವೇ ಇಲ್ಲಿಯೂ ಆಗುತ್ತದೆ. ಈ ವಿಸರ್ಜನೆಯೂ ಒಂದು ಪಾಠವನ್ನು ಹೇಳಿಕೊಡುತ್ತದೆ. ಸಂತಸದ ಘಳಿಗೆಗಳೇ ಶಾಶ್ವತವಲ್ಲವೆಂದೂ ಜೀವನದ ಅನಿವಾರ್ಯಗಳನ್ನು ಮರೆಯಬಾರದೆಂದು ಆ ಸಂಭ್ರಮದಲ್ಲಿಯೇ ಗಣಪ ನಮಗೆ ಮೆಲ್ಲನೆ ಕಿವಿಮಾತು ಹೇಳುತ್ತಾನೆ.

ಗಣೇಶನ ವ್ಯಾಪ್ತಿ ಎಲ್ಲ ಕ್ಷೇತ್ರಗಳಲ್ಲೂ ಕಾಣುತ್ತದೆ. ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಂತೂ ಪಿಳ್ಳಾರಿ ಗೀತೆಗಳಿಂದ ಶಿಕ್ಷಣ ಆರಂಭವಾಗುತ್ತದೆ. ಅದೂ "ಲಂಬೋದರ ಲಕುಮಿಕರ" ಎಂಬ ಗಣೇಶಸ್ತುತಿಯಿಂದ. ಕಾವ್ಯನಾಟಕಾದಿಗಳಲ್ಲೂ ಆರಂಭದಲ್ಲಿ ಗಣೇಶಸ್ತುತಿಯೇ. ಈಗಿನ ಚಲನಚಿತ್ರಗಳಲ್ಲೂ ಹಾಗೆಯೇ! ಮನೆಗಳ ಮುಂದೆ ಗಣೇಶನ ಮೂರ್ತಿಯೊಂದು ಸಾಮಾನ್ಯವಾಗಿ ಕಾಣುತ್ತದೆ. ಅದು ಗಣೇಶನ ಸಂಕೇತವಾಗಿರುವುದರಿಂದ ವಿಘ್ನಗಳನ್ನು ನಿವಾರಿಸುವುದು ಎಂದು ನಂಬಿಕೆ. ಅದಕ್ಕೆ ಒಂದೆಡೆ "ಕಲೌ ದುರ್ಗಾವಿನಾಯಕೌ" ಅಂದರೆ ಕಲಿಯುಗದಲ್ಲಿ ದುರ್ಗೆ ಮತ್ತು ವಿನಾಯಕರ ಪೂಜೆಯನ್ನು ವಿಶೇಷವಾಗಿ ಮಾಡಬೇಕೆಂದು ಹೇಳಿದೆ. ಸಂತಸದ ಸಮಯದಲ್ಲಿ ಮತ್ತು ಆಪತ್ತಿನ ಸಮಯದಲ್ಲೂ ಪ್ರೀತಿಯಿಂದ ಸಲಹುವ ಮಿತ್ರನಾಗಿ, ಸರ್ವಕಾಲವೂ ಭಕ್ತರನ್ನು ಕಾಯುವ ದೇವರಾಗಿ ಗಣೇಶ ಎಲ್ಲರ ಪ್ರೀತಿಭಕ್ತಿಗಳಿಗೆ ಪಾತ್ರನಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಕೆಲಸದ ಆರಂಭದಲ್ಲಿ ಕೋಟ್ಯಂತರ ಜನಗಳು ನೆನೆಯುವ ಆ ಗಣೇಶನು ನಮ್ಮ ವಿಘ್ನಗಳನ್ನು ನಿವಾರಿಸಿ ವಿದ್ಯಾಬುದ್ಧ್ಯಾಯುರಾರೋಗ್ಯೈಶ್ವರ್ಯಗಳನ್ನೂ ಚತುರ್ವಿಧಪುರುಷಾರ್ಥಗಳನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ಇಲ್ಲಿಗೆ ನನ್ನ ಗಣೇಶಾಲೋಕನವನ್ನು ಸಂಪನ್ನಗೊಳಿಸುವೆ.

|| ಇತಿ ಶಮ್ ||

Saturday, August 19, 2006

Panini the grammarian par excellence

yenAkSharasamAmnAyam adhigamya maheshvarAt |
kRutsnaM vyAkaraNaM proktaM tasmai pANinaye namaH ||

I recently have been having the fortune of attending classes on the laghu-siddhAnta-kaumudI, a Samskrit grammar text for beginners taught by a very well known and respected grammarian. Even in the first couple of prakaraNas (chapters), I have found myself in awe of the genius of pANini, the great grammarian who put the vyAkaraNa sUtras together in eight chapters. The collective work is known as the aShTAdhyAyii.

The shloka at the beginning of this post salutes pANini by whom Samskrit grammar in its entirety has been described after having obtained the requisite knowledge by the grace of Lord Maheshvara. The legend behind pANini's composition of the aShTAdhyAyI itself is quite interesting.

Legend has it that pANini was born a dull child, but as one whose interest in learning knew no bounds. An astrologer who happened to pass through his school read pANini's palm and broke to him the news that the child's palm had no line for learning. The heartbroken but not completely dissuaded boy wanted no impediments to his learning. Soon after, pANini's Guru saw a happy boy whose palm was bleeding. Upon asking, pANini answered that he had drawn the "line of learning" on his palm with a knife. The guru was overjoyed on seeing the interest in learning that pANini had and vowed to make him a scholar.

As time passed, pANini prayed to Lord Shiva to bless him with a grammar for Samskrit. Pleased by his penance, Lord Shiva appeared in front of pANini and danced while beating his Damaru (Drum). Fourteen sounds issued forth from the Damaru and they provided the much needed insight for pANini to compose a grammar of Samskrit.

Before the remaining part of this post, I would like to make a disclaimer. I am no expert in Samskrit (and especially in vyAkaraNa) and mistakes in this post, if any (I am sure there will be quite a few), are mine only. My intention here is just to share the enthusiasm I have about the subject.

In the remaining part of this post, letters in italics (in ITRANS) are supposed to denote the letters of the sUtras of pANini (as much as possible). The fourteen sounds, known as the mAhesvara-sUtrANi are as follows -
| a i uN | R^i lR^i k | e o ~G | ai au ch | ha ya va ra T | la N | ~Ja ma ~Ga Na na M | Jha bha ~J | gha Dha dha Sh | ja ba ga da sh | kha pha Cha Tha tha cha Ta tav | ka pa y | sha Sha sa r | ha l ||

Hearing them again and again, it really feels as if they came out of a drum. But these sUtras form the bedrock of Samskrit grammar. Even though there were several grammars for Samskrit in existence before that of pANini, pANini's grammar outshone all the others in such a fashion that the other older grammars are but known just by name. pANini's grammar has apparently been so effective that there have been no significant attempts to compose any grammar after that.

Historically, pANini was born in Attock in today's Pakistan in the 6th century BCE. Just a brief digression about his birth and its place. Attock is a place close to Peshawar, which is the capital of the now lawless North Western Frontier Province, where Osama bin Laden is supposed to be hiding now. Recently there was an interesting program on television which showed the lawless trigger happy folk of the NWFP. I could not help but think that around a couple of thousand years ago, even these people would have been cultural sanAtana dharmIyas. Looking at how notorious this place has become on the world map, it made me cringe when I realized that pANini was also born around the same place. Does the Pakistan government even realize that such great people walked its soil before the RoP (I am sorry that I have to give such a link) wrought havoc in the area? Do the people in that area even realize that their ancestors were the likes of pANini? Or is the official position that they were all supposed to be in jahiliyya? Anyway, let me get back to pANini's wonderful grammar.

The aforementioned fourteen sutras, if we observe carefully, contain all the letters of the Samskrit varNamAla - the svaras (vowels) a, i, u, R^i, lR^i, e, ai, o, au and all the vyanjanas (consonants). Using these, pANini makes more formulae known as pratyAhAras. For example, aN - would mean a i u N (if you looked at the above 14 sUtras, a i u N is the first sUtra). Similarly ak would mean a i u N R lR k i.e it would include all the varNas (letters) between a and k. You could make up other pratyAhAras such as ha T (which would denote ha ya va ra ) and ech (e O ~G ai au ch). Of course, the underlined letters in the above just serve as silent separators (known as it). This is just a minor part of vyAkaraNa which has a whole lot more than just pratyAhAras.

Let us take the first sUtra of the aShTAdhyAyI to just see how pANini has used these. The first one is || vR^iddhirAdaich ||. This is a two worded sUtra which can be split as vRuddhiH Adaich. It just means that "whenever in the following sUtras the word vRuddhi is encountered, it means Adaich". Now the question is - what is Adaich ? It can be split as At aich. "At" denotes the letter "aa" and aich from the preceding paragraphs and the mAheshvara-sUtrANi becomes "ai au ch". Hence the complete meaning of the sUtra is that the term vRuddhi is used to denote the vowels aa, ai and au. This terminology is then used in subsequent chapters. This was just to get a flavor for how pANini's sUtras are.

Sutras themselves mean terse axioms explaining a specific topic. pANini's aShTAdhyAyI has almost four thousand sUtras divided into eight adhyAyAs or chapters. Each adhyAya has pAdas and each pAda has the individual sUtras. In nearly four thousand sUtras, pANini has managed to capture both versions of Samskrit - worldly and vedic.

Just to clarify, pANini did not invent the Samskrit language. Samskrit had been spoken for a long time before pANini. pANini "merely" (if you can call it that) codified rules to describe correct Samskrit. pANini's effort is probably one of its kind as it uses a synthetic method to completely capture a natural language. As a result, it becomes possible for somebody born ten years ago to speak and understand the same language as somebody else who was born a couple of thousands of years ago. pANini's monumental effort has not strait-jacketed Samskrit - but has defined its boundaries and correct forms very well.

The methodology used by pANini apparently has the same expressive power as the Backus Naur Form (also known now as the pANini-Backus form in deference to pANini who had discovered it first), a method used to express formal languages. But pANini was the first one to use it for a natural language and that too for a language as great and vast as Samskritam. The intricacies in the sUtras (even recursion is used wonderfully) are too much for a human mind to comprehend and constantly remind us of a programming language. Of course, Samskrit itself is not a language suitable for computer programming as many Hindu enthusiasts have been led to believe. pANini's method is what is close to computing. But pANini's effort is definitely the first of its kind in the history of linguistics and so has been acknowledged by several modern linguists such as Noam Chomsky. Of course, pANini-maharShi has been praised to no end by the great bhAShyakAra patanjali himself (author of the mahAbhAShya) and does not need Chomsky's as well as our endorsements of his work.

I just had a final comment in this post on how important true recognition of our heritage is. While we have people like the Communists on the left end of the spectrum, who think that ancient India offered nothing lasting to the world and was forever mired in evils like caste and sati, we also have simple minded people in the likes of the VHP for whom anything good has to be Indian and Hindu in origin; conveniently forgetting the fact that Ravana and Duryodhana were also "Hindus". The truth is probably somewhere in the middle and in my opinion, closer to the right than to the left. It is for us to see what the truth is.

pANini's work is a monument to Human Genius. We can just humbly echo Saint tyAgarAja's wonderful words - "endaro mahAnubhAvulu; andariki vandamulu"

|| bhagavate pANinaye namaH ||
|| jIyAt gIrvANabhAratI ||

Thursday, August 17, 2006

ಸ್ವಾತಂತ್ರ್ಯದಿವಸದ ಕಿರುನೆನಪುಗಳು

ಸಾಕಷ್ಟು ಸ್ವಾತಂತ್ರ್ಯದಿವಸಗಳನ್ನು ನೋಡಿದ್ದೇನೆ. ಒಂದರಂತೆ ಒಂದಿಲ್ಲದಿದ್ದರೂ ಆ ದಿನ ಸಾಮಾನ್ಯವಾಗಿ ಮೂಡಿಸುವ ಭಾವನೆಗಳು ಬಹುಪಾಲು ಹಾಗೆಯೇ ಇಂದಿಗೂ ಇವೆ.

ಶಾಲೆಯಲ್ಲಿ ಓದುವಾಗ ಸ್ವಾತಂತ್ರ್ಯದಿನ ನಮ್ಮ ದೇಶದ ಬಗ್ಗೆ ಯೋಚಿಸುವ ಸಮಯವಾಗಿತ್ತು. ವಿಶೇಷವಾಗಿ ಸ್ವಾತಂತ್ರ್ಯಸಂಗ್ರಾಮದ ಬಗ್ಗೆ. ಅಂದಿನ ಹುತಾತ್ಮರ ಬಗ್ಗೆ. ಗಾಂಧಿ-ನೆಹರು-ಪಟೇಲ್ ಮುಂತಾದವರ ಹಳೆಯ ಚಿತ್ರಗಳು ಟಿ.ವಿ.ಯಲ್ಲಿ ಬಿತ್ತರಗೊಳ್ಳುತ್ತಿದ್ದವು. ಅದನ್ನೇ ನೋಡಿ ನನಗೆ ಸಂತೋಷ. ದೇಶಭಕ್ತಿಯ ತಾತ್ಕಾಲಿಕ ಆವೇಶ. ಜೊತೆಗೆ ಬಿಳಿಯ ಸಮವಸ್ತ್ರ ಧರಿಸಿ ಶಾಲೆಗೆ ಹೋಗೋಣ - ಅಲ್ಲಿ ಸಾಮೂಹಿಕ ವ್ಯಾಯಾಮದಲ್ಲಿ ಪಾಲ್ಗೊಳ್ಳೋಣ - ಧ್ವಜಾರೋಹಣ ಕಾರ್ಯಕ್ರಮದ ನಂತರ ಚಾಕಲೇಟ್ ಅಥವಾ ಮತ್ತೊಂದು ಮಿಠಾಯಿಯ ತಿನ್ನೋಣ ಎಂಬ ಕ್ರಮವೇ ಸಾಧಾರಣವಾಗಿ ಎಲ್ಲ ಶಾಲೆಗೆ ಹೋಗುವ ಮಕ್ಕಳಿಗೂ ಇದ್ದಿತ್ತು.

ಶಾಲೆಯ ನಂತರ ಕಾಲೇಜು. ಅಲ್ಲಿ ಶಾಲೆಗೆ ಹೋಗಲೇ ಬೇಕೆಂಬಂತೆ ಕಡ್ಡಾಯವಿಲ್ಲ. ಹೋಗಲು ಇಷ್ಟವಿದ್ದವರು ಹೋಗಬಹುದು. ಇಲ್ಲದೇ ಮನೆಯಲ್ಲಿರಬಹುದು. ನನಗೋ ಎನ್.ಸಿ.ಸಿ ಮುಂತಾದ ಚಟುವಟಿಕೆಗಳು ಸ್ವಲ್ಪ ಬೋರು ಹೊಡೆಸುವಂಥವು. (ಈಗ ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಪಶ್ಚಾತ್ತಾಪ, ಬಿಡಿ) ಕ್ರಿಕೆಟ್, ಕಥೆಪುಸ್ತಕ ಓದುವುದು, ಬೀದಿ ಸುತ್ತುವುದು, ಟಿ.ವಿ. ನೋಡುವ ಮೊದಲಾದ ಕಾರ್ಯಕ್ರಮಗಳೇ ಇಷ್ಟ. ಕಡ್ಡಾಯವಿರದುದರಿಂದ ಗರಿಗೆದರಿದ ಹಕ್ಕಿಯ ಹಾಗೆ ನನಗೂ ಸ್ವಾತಂತ್ರ್ಯದ ಅನುಭವ. ಆದರೂ ಮನೆಯ ಒಳಗೆ ಕಾಫಿ ಹೀರುತ್ತಾ ಕೆಂಪು ಕೋಟೆಯ ಮೇಲಿನ ಭಾಷಣದ ವೀಕ್ಷಣೆ . ಅಂದಿನ ಪ್ರಧಾನಿಗಳು ಏನು ಹೇಳಿದರೋ ಯಾರಿಗೆ ಗೊತ್ತು? ಹೇಗಿದ್ದರೂ "ಹೇಳುವುದು ಒಂದು - ಮಾಡದಿರುವುದೇ ಹಲವು ಹನ್ನೊಂದು" ಎಂಬ ನನ್ನ ಆಗಲೇ ಮೂಡಿದ ಒಂದು ಸಿನಿಕತೆ (cynicism) ಬೇರೆ! ಆದರೆ ಇದರ ನಡುವೆಯೂ ದೇಶಭಕ್ತಿಯ ತಾತ್ಕಾಲಿಕ ಆವೇಶ!

ನಂತರ ಅಮೇರಿಕಕ್ಕೆ ಗಮನ. ಅಲ್ಲಂತೂ ಈ ದಿನದಂದು ರಜೆಯಿಲ್ಲ. ಮಾಮೂಲಿನ ಹಾಗೆ ಇದೂ ಒಂದು ದಿನ. ಕೆಲಸವೆಲ್ಲವೂ ಮಾಮೂಲಿನ ಹಾಗೆಯೇ! ಆದರೆ ದೇಶವನ್ನು ಬಿಟ್ಟವರಿಗೆ ಏನನ್ನೋ ಬಿಟ್ಟಿದ್ದೇವೆಂಬ ಭಾವನೆ ಹೆಚ್ಚಾಗಿರುತ್ತದೆ ಎಂಬುದು ನನ್ನ ಅನುಭವ. ಅಂದು ವಿಶೇಷವಾಗಿ ನಮ್ಮ ದೇಶದಲ್ಲಿ ಏನು ನಡೆಯಿತು ಎಂದು ಅಂತರ್ಜಾಲ ಪತ್ರಿಕೆಗಳಲ್ಲಿನ ವಿಷಯದ ಹೆಕ್ಕುವಿಕೆ. ಏನೂ ಆಗದಿರಲಿ ಭಯೋತ್ಪಾದಕರಿಂದ ಎಂಬ ಪ್ರಾರ್ಥನೆ. ನಮ್ಮ ದೇಶದ ಆಡಳಿತಕ್ಕೆ ಏನಾಗಿದೆ ಎಂಬ ಒಂದು ಚಿಂತೆ. ಅಮೇರಿಕದ ಸೌಲಭ್ಯಗಳನ್ನು ನೋಡಿ ನಮ್ಮ ದೇಶಕ್ಕೆ ಹೀಗೆ ಎಂದಾಗುವುದೋ ಎಂಬ ಯೋಚನೆ. ಜೊತೆಗೆ ಶುಭಾಶಯಗಳನ್ನು ನೀಡಲು ಅವರಿವರಿಗೆ ಈ-ಮೈಲ್ ಕಳಿಸಿವುದು. ಕಾರ್ಯಕ್ರಮವೇನಾದರೂ ಇದ್ದರೆ ವಾರಾಂತ್ಯದಲ್ಲಿ ಇರುತ್ತಿತ್ತು. ಅದರಲ್ಲಿ ಆದಾಗ ಭಾಗವಹಿಸುವುದು. ಹೀಗೆ ಅಲ್ಲಿ ಸಾಗಿತ್ತು. ಅಲ್ಲೂ ದೇಶಭಕ್ತಿಯ ಆವೇಶ - ಇನ್ನೂ ತಾತ್ಕಾಲಿಕವೇ!

ಭಾರತಕ್ಕೆ ಮರಳಿದ ನಂತರ ಆಗಸ್ಟ್ ೧೫ರಂದು ರಜೆಯಂತೂ ಸಿಗುತ್ತದೆ. ಆದರೆ ಸಾಮಾನ್ಯದ ರಜೆಯಂತಾಗಿದೆ. ಧಾರ್ಮಿಕವಾದ ಒಂದು ಅಂಶ ಈ ದಿನಕ್ಕಿಲ್ಲ. ಆದ್ದರಿಂದ ವಿಶೇಷದ ಹೂವು ಹಣ್ಣು ಪೂಜೆ ಇತ್ಯಾದಿಗಳು ಅಂದು ಇರುವುದಿಲ್ಲ. ಒಂದೇ ಒಂದು ಸಂಗತಿ ಈ ನಡುವೆ ಬೆಂಗಳೂರಿನಲ್ಲಿ ಕಾಣಿಸಿತು. ಅದು ಭಾರತದ ಬಾವುಟಗಳ ಮಾರಾಟ. ಸಣ್ಣ ಹಾಗು ದೊಡ್ಡ ಗಾತ್ರದ ಬಾವುಟಗಳು ಪ್ರತಿಯೊಂದು ದೊಡ್ಡ ಟ್ರಾಫಿಕ್ ಸಿಗ್ನಲ್ ನಲ್ಲಿಯೂ ಲಭ್ಯ. ಬಹುತೇಕ ಎಲ್ಲ ಆಟೋಗಳ ಮೇಲೆ ನಮ್ಮ ದೇಶದ ಧ್ವಜದ ಹಾರಾಟ. ಜೊತೆಗೆ ಕಾರು ಬೈಕುಗಳ ಮೇಲೆಯೂ. ನಮ್ಮ ಸರ್ಕಾರ ದೊಡ್ಡ ಮನಸ್ಸು ಮಾಡಿ ಈಗ ಬಾವುಟಗಳನ್ನು ನಿರ್ಬಂಧಿಸುವುದನ್ನು ನಿಲ್ಲಿಸಿದೆ. ಅದರಿಂದಲೇ ಈಗ ಬಾವುಟಗಳ ಬಿರುಸಾದ ಬಿಕರಿ ನಡೆದಿರುತ್ತದೆ. ಹಿಂದೆಯಾದರೋ ಬಾವುಟವೆಂದರೆ ಮಡಿಯ ವಸ್ತು - ಅದನ್ನು ಮುಟ್ಟಿದರೇ ಅದಕ್ಕೆ ಅವಮಾನ ಮಾಡಿದ ಹಾಗೆ ಅನ್ನಿಸುವಷ್ಟು ಕಠಿನ ನಿಯಮಗಳು ಜಾರಿಯಲ್ಲಿದ್ದವು. ಇವುಗಳ ಸಡಿಲಿಕೆ ಸರ್ಕಾರ ಮಾಡಿರುವ ಒಳ್ಳೆಯ ಕೆಲಸ. ಅವುಗಳು "ಮೇಡ್ ಇನ್ ಚೈನಾ" ಆಗದಿದ್ದರೆ ಒಳ್ಳೆಯದು! (ಅಮೇರಿಕದಲ್ಲಿ ಸಾಮಾನ್ಯವಾಗಿ ಅಲ್ಲಿನ ಸಾಮಾನ್ಯ ಖರೀದಿಗೆ ಸಿಗುವ ಬಾವುಟಗಳೆಲ್ಲವೂ ಮೇಡ್ ಇನ್ ಚೈನಾ!). ಈ ಬಾವುಟದ ಅಂಶ ಬಿಟ್ಟರೆ ಈ ದಿನ ಸಾಮಾನ್ಯದ ರಜೆ. ಹೌದು, ಇಂದೂ ಕೆಂಪು ಕೋಟೆಯ ಮೇಲೆ ನಿಂತು ಮಾತುಗಳನ್ನಾಡುತ್ತಾರೆ, ಆದರೆ ಅವು ಎಂದಿನಂತೆ ಪ್ರಯೋಜನಕ್ಕೆ ಬಾರದವು. ಬದಲಾವಣೆಗಳಾಗಿಯೂ ಬದಲಾವಣೆಯಿಲ್ಲದ ವರ್ತನೆಗಳು ನನ್ನಲ್ಲಿನ ಸ್ವಾತಂತ್ರ್ಯ ದಿನದ ತಾತ್ಕಾಲಿಕ ದೇಶಭಕ್ತಿಯ ಆವೇಶವನ್ನೂ ಇಲ್ಲದ ಹಾಗೆ ಮಾಡಿವೆ. ಈ ಆವೇಶಕ್ಕೆ ಕಾರಣವೇನೆಂದು ಹುಡುಕಲು ಮೊದಲು ಹೊರಟ ನನಗೆ ಈ ಆವೇಶ ವ್ಯರ್ಥವಾದದ್ದು, ನಿರರ್ಥಕವಾದದ್ದು ಎಂಬ ಭಾವನೆ ತರಿಸಿತ್ತು.

ಈ ಹತಾಶೆಯ ನಡುವೆ ಮೊನ್ನೆ ಶಾಲೆಯೊಂದರ ಮುಂದೆ ಹಾದು ಹೋಗುವ ಸಂದರ್ಭ ಬಂದಿತು. ಬಿಳಿ ಉಡುಪುಗಳನ್ನು ಧರಿಸಿ ಮಕ್ಕಳು ಹೊರಗೆ ಬರುತ್ತಿದ್ದರು. ಅವರ ಮುಖಗಳ ಮೇಲಿನ ನಗೆ, ಆ ಕಣ್ಣುಗಳಲ್ಲಿನ ಕಾಂತಿ, ಅವರು ಸೂಸುವ ಆಶಾಭಾವನೆ, ಅವರಲ್ಲಿನ ಲವಲವಿಕೆ - ಇವೆಲ್ಲವೂ ನನ್ನನ್ನು ಒಮ್ಮೆಲೆ ತಟ್ಟಿತು. "ಎಲ್ಲವೂ ಇನ್ನು ಹಾಳಾಗಿಲ್ಲ. All is not lost" ಎಂದು ಮನ ಹರ್ಷಿಸಿತು.
ಇತಿ ಶಮ್

Sunday, August 06, 2006

ವಿರಾಟಪರ್ವ, ನಳೋಪಾಖ್ಯಾನ ಮತ್ತು ಸೂಪರ್ ಮ್ಯಾನ್

ವಿರಾಟ ಪರ್ವ, ನಳನ ಕಥೆ ಮತ್ತು ಸೂಪರ್ ಮ್ಯಾನ್ - ಈ ಮೂರೂ ಕಥೆಗಳು ನನಗೆ ಪ್ರಿಯವಾದವು. ನನಗಷ್ಟೇ ಅಲ್ಲದೆ ಬಹಳಷ್ಟು ಜನರಿಗೆ ಪ್ರಿಯವಾದವು. ಈ ಮೂರು ಭಾಗಗಳಲ್ಲೂ ಮೂಲಭೂತ ರೀತಿಯಲ್ಲಿ ಒಂದು ಸಮಾನವಾದ ಅಂಶ ನನಗೆ ಕಾಣಿಸಿತು. ವಸ್ತುತಃ ಅದೇ ನನ್ನ ಈ ಭಾಗಗಳ ಬಗೆಗಿನ ಪ್ರೀತಿಗೆ ಕಾರಣ ಎಂದೂ ಅನ್ನಿಸಿತು. ಏನೀ ಕಾರಣವೆಂಬುದನ್ನೇ ಇಲ್ಲಿ ವಿಶದಗೊಳಿಸಲು ಯತ್ನಿಸಿದ್ದೇನೆ.

ವಿರಾಟಪರ್ವಕ್ಕೂ ನಲೋಪಾಖ್ಯಾನಕ್ಕೂ ಥಟ್ಟನೆ ಹೊಳೆಯುವ ಒಂದು ಸಂಬಂಧವುಂಟು. ಇವೆರಡೂ ಭಾಗಗಳು ಭಾರತೀಯರ ಕಾವ್ಯಕಥಾಸ್ರೋತಸ್ಸಿಗೆ ಮೂಲವಾದ ಇತಿಹಾಸಪುರಾಣವೆಂಬ ಪರ್ವತದ ಶಿಖರಪ್ರಾಯವಾಗಿರುವ ಮಹಾಭಾರತದವು. ಮಹಾಭಾರತವೆಂದರೆ "ಪಂಚಮೋ ವೇದಃ" ಎಂದು ಖ್ಯಾತವಾದುದು. ಮಹಾಭಾರತದ ಗುಣಗಾನ ಎಷ್ಟು ಮಾಡಿದರೂ ಸಾಲದಾದರೂ, ಇಲ್ಲಿನ ಉದ್ದೇಶ ಅದಲ್ಲವಾಗಿದ್ದರೂ, ಅದರ ಬಗ್ಗೆ ಒಂದು ಒಳ್ಳೆಯ ಮಾತು ಹೇಳದೇ ಇರಲು ಸಾಧ್ಯವಾಗದೆ ಪಂಚಮೋ ವೇದಃ ಎಂದು ಹೇಳಿದೆ ಅಷ್ಟೆ.

ಪುಸ್ತಕದ ಕಪಾಟಿನಲ್ಲಿ ಕೈಯಾಡಿಸುತ್ತಿದ್ದಾಗ ಶ್ರೀ ಏ. ಆರ್. ಕೃಷ್ಣಶಾಸ್ತ್ರಿಗಳ ವಚನಭಾರತ ಸಿಕ್ಕಿತು. ಸೊಗಸಾದ ಗ್ರಂಥ. ಪುಟ ತಿರುವಿದಾಗ ವಿರಾಟಪರ್ವದ ಉತ್ತರಗೋಗ್ರಹಣ ಪ್ರಸಂಗ ಸಿಕ್ಕಿತು. ಅದನ್ನು ಓದಿದಾಗ ನನಗಾದ ಆನಂದ ಅಷ್ಟಿಷ್ಟಲ್ಲ. ಪಾಂಡವರ ಹದಿಮೂರು ವರ್ಷಗಳ ಅರಣ್ಯ ಮತ್ತು ಅಜ್ಞಾತವಾಸದ ನಂತರ ಅವರಿಗಾದ ಬಿಡುಗಡೆಯ ಆನಂದ ನಮ್ಮನ್ನು ತಟ್ಟದೇ ಇರುವುದಿಲ್ಲ. ಇಲ್ಲಿ ವಿಶೇಷತಃ ನನಗೆ ಹಿಡಿಸಿದ್ದು ಅರ್ಜುನನ ಶೌರ್ಯದ ವರ್ಣನೆ. ಅರ್ಜುನನು ಬೃಹನ್ನಳೆಯಾಗಿ ನಾಟ್ಯಾಚಾರ್ಯನಾಗಿದ್ದರೂ ವಿರಾಟಪುತ್ರನಾದ ಉತ್ತರಕುಮಾರನ ಸಾರಥ್ಯ ಅವನಿಗೆ ಒದಗಿ ಬರುತ್ತದೆ. ಅಲ್ಲಿ ರಣಹೇಡಿಯಾಗಿ ಓಡುವ ಉತ್ತರನನ್ನು ಯುದ್ಧಕ್ಕಾಗಿ ಹುರಿದುಂಬಿಸಲು ಮಾಡುವ ವ್ಯರ್ಥಪ್ರಯತ್ನ ವಿನೋದಮಯವಾಗಿದೆ. ಇದಾದ ನಂತರ ಸ್ವತಃ ಅರ್ಜುನನೇ ರಥಿಯಾಗಿ ಭೀಷ್ಮದ್ರೋಣಾದಿಗಳ ಎದುರು ಒಬ್ಬನೇ ನಿಲ್ಲುತ್ತಾನೆ. ಹದಿಮೂರು ವರ್ಷಗಳ ಅವಮಾನ, ದುಃಖ, ಕಷ್ಟಗಳು ಒಮ್ಮೆಯೇ ನೆನಪಿಗೆ ಬಂದು, ಅದಕ್ಕೆ ಕಾರಣಭೂತರಾದವರು ಎದುರಿಗೇ ಇದ್ದಾಗ ಅಸಹಾಯಶೂರನಾದ ಅರ್ಜುನನ ಸಾಮರ್ಥ್ಯ ವಿಜೃಂಭಿಸುತ್ತದೆ. ಎಲ್ಲರನ್ನೂ ಲೀಲಾಜಾಲವಾಗಿ ಧೂಳೀಪಟಮಾಡಿಬಿಡುತ್ತಾನೆ. ಕರ್ಣನ ಮಾತುಗಳು ಕೇವಲ ವ್ಯರ್ಥಪ್ರಲಾಪಗಳಾಗಿಯೇ ಉಳಿಯುವ ಹಾಗೆ ಮಾಡುತ್ತಾನೆ. ಅರ್ಜುನನ ಶೌರ್ಯಸಾಮರ್ಥ್ಯಗಳನ್ನು ವೈರಿಗಳ ಮೂಲಕ ಹೇಳಿಸಿರುವುದು ಬಹಳ ಚೆನ್ನಾಗಿ ಮೂಡಿಬರುತ್ತದೆ. ಭೀಷ್ಮ - "ಗಾಳಿಯು ಬೀಸುತ್ತಿದೆ. ಕುದುರೆಗಳು ಕಣ್ಣೀರಿಡುತ್ತಿವೆ. ಉತ್ಪಾತಗಳು ಕಾಣಿಸುತ್ತಿವೆ. ಇಂದು ಅವಶ್ಯವಾಗಿ ಹೆಚ್ಚಿನ ಹಿಂಸೆ ನಡೆಯುವ ಹಾಗಿದೆ. ಬಂದಿರುವವನು ಅರ್ಜುನನೇ ಇರಬೇಕು" ಎಂಬ ಮೊದಲಾದ ಮಾತುಗಳಲ್ಲಿ ವೀರರಸ ತುಂಬಿ ತುಳುಕುತ್ತದೆ. ಅಶ್ವತ್ಥಾಮನೂ ಕೃಪಾಚಾರ್ಯನೂ ದ್ರೋಣನೂ ಅರ್ಜುನನನ್ನು ಹೊಗಳುವವರೇ. ಇಲ್ಲಿನ ಯುದ್ಧವನ್ನು ಕುರುಕ್ಷೇತ್ರ ಯುದ್ಧಕ್ಕಿಂತಲೂ ಬಹಳ ಸುಲಭವಾಗಿ ಅರ್ಜುನ ನಿರ್ವಹಿಸುತ್ತಾನೆ.

ನಂತರ ಇದೇ ಭಾಗವನ್ನು ಕುಮಾರವ್ಯಾಸಭಾರತದಲ್ಲಿ ಓದಲು ನೋಡಿದೆ. ಉತ್ತರಗೋಗ್ರಹಣದ ಒಂದು ಸಂಧಿಯನ್ನು ಓದಿದಾಗ ಅಲ್ಲಿ ಕುಮಾರವ್ಯಾಸನ ವರ್ಣನೆ ಅದ್ಭುತವಾಗಿ ಕಂಡಿತು. ಅಬ್ಬ! ಕುವೆಂಪುರವರು ಹೇಳಿದ "ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಲಿ ಕುಣಿಯುವುದು" ಎಂಬ ಮಾತು ಎಷ್ಟು ಸತ್ಯವೆಂದು ಮತ್ತೊಮ್ಮೆ ಮನಗಂಡೆ.

ಕೌರವರ ಪರಾಜಯದ ಬಳಿಕ ಪಾಂಡವರ ನಿಜಸ್ವರೂಪದ ಜ್ಞಾನ ವಿರಾಟಾದಿಗಳಿಗಾಗುತ್ತದೆ. ಇದಾದಾಗ ಮನಸ್ಸಿಗೆ ಏನೋ ಒಂದು ಸಂತಸ; ಜೊತೆಗೆ ನೆಮ್ಮದಿ ಕೂಡ.

ಅಂತೂ ನನಗೆ ಭಾರತದಲ್ಲಿ ಪ್ರಿಯವಾದ ಭಾಗ ವಿರಾಟಪರ್ವ. ಸರಿ, ಮನಯಲ್ಲಿ ನಮ್ಮ ತಂದೆಯವರನ್ನೂ ತಾಯಿಯವರನ್ನೂ ಭಾರತದಲ್ಲಿನ ನಿಮ್ಮ ಪ್ರಿಯವಾದ ಭಾಗ ಯಾವುದೆಂದು ಕೇಳಿದೆ. ಅವರೂ ವಿರಾಟಪರ್ವವೆನ್ನುವುದೇ? ಆಗ ನನ್ನ ಕುತೂಹಲ ಇನ್ನೂ ಕೆರಳಿತು. ಇದು ಹೀಗೆ ಏಕಿರಬಹುದೆಂದು.

ನಲನ ಕಥೆಯೂ ಹಾಗೆ. ಬಹಳ ಇಷ್ಟ ನನಗೆ. ವಿಶೇಷತಃ ದಮಯಂತಿ ಮಾಡುವ ಉಪಾಯದಿಂದ ಬಾಹುಕ ರೂಪದಲ್ಲಿರುವ ನಳನನ್ನು ಕುಂಡಿನಾಪುರಕ್ಕೆ ಮೋಸದ ಸ್ವಯಂವರಕ್ಕೆ ಕರೆಯುವ ಭಾಗ ಚೆನ್ನಾಗಿದೆ. ಬಾಹುಕನು ತನ್ನ ದೊರೆಯಾದ ಋತುಪರ್ಣನಿಗೆ ಬೋಧಿಸುವ ಅಕ್ಷವಿದ್ಯೆ, ಅಶ್ವವಿದ್ಯೆ - ಇವೆಲ್ಲವೂ ಕುತೂಹಲಕಾರಿಯಾಗಿದೆ. ತನ್ನ ಪತ್ನಿಯಾದ ದಮಯಂತಿಯನ್ನು ತನ್ನ ಮುದ್ದಿನ ಮಕ್ಕಳನ್ನೂ ಕಂಡಿಯೂ ಸಹ ಏನು ಮಾಡಲಾರದ ನಳನ ಸ್ಥಿತಿ ಕರುಣಾಜನಕವಾಗಿದೆ. ಒಟ್ಟಿನಲ್ಲಿ ಕಥೆಯು ಸುಖಾಂತ್ಯಗೊಳ್ಳುತ್ತದೆ.

ಸೂಪರ್ ಮ್ಯಾನ್ ೧೯೩೦ರ ಆಸುಪಾಸಿನಲ್ಲಿ ಸೃಷ್ಟಿಸಲ್ಪಟ್ಟ ಕಾಮಿಕ್ ಕಥಾಸರಣಿಯ ನಾಯಕ. ಅಮೇರಿಕದಲ್ಲೇ ಅಲ್ಲದೆ ಪ್ರಪಂಚದಾದ್ಯಂತ ಬಹಳಷ್ಟು ದೇಶಗಳಲ್ಲಿ ಇವನ ಅಭಿಮಾನಿಗಳಿದ್ದಾರೆ. ಚಿಕ್ಕಂದಿನಲ್ಲಿ ನಾನು ಕೂಡ! ಈಗಲೂ ಸೂಪರ್-ಮ್ಯಾನ್ ಎಂದರೆ ನನಗೆ ಬಹಳ ಇಷ್ಟ.

ಇವು ಮೂರರಲ್ಲೂ ಕಾಣುವ ಸಮಾನ ಅಂಶವೊಂದು ನನಗೆ ಹೊಳೆಯಿತು. ಇದೇ ಇವುಗಳ ಯಶಸ್ಸಿಗೂ ಜನಪ್ರಿಯತಗೂ ಕಾರಣವೇ? ನನಗೆ ಹೌದು ಎಂದೆನಿಸುತ್ತದೆ. ನಿಮಗೇನೋ ಹೇಳಿ ತಿಳಿಸಿರಿ.

ಸಮಾನ ಅಂಶವೆಂದರೆ - ಇವುಗಳಲ್ಲಿನ ನಾಯಕಪಾತ್ರವು ಸಶಕ್ತವಾಗಿದ್ದರೂ ಕಾರಣಾಂತರಗಳಿಂದ ಬದ್ಧವಾಗಿ ಸ್ವಾತಂತ್ರ್ಯವನ್ನು ಕಳೆದುಕೊಂಡಿದೆ. ವಿರಾಟನ ಅರಮನೆಯಲ್ಲಿ ರಾಜ್ಯಾಧಿಪತಿಗಳಾಗಿದ್ದ ಪಾಂಡವರು ಸಾಮಾನ್ಯ ಕೆಲಸದವರಾಗಿ ಸೇರಿರುತ್ತಾರೆ. ಚಕ್ರವರ್ತಿಯಾಗಿದ್ದ ನಲನು ಋತುಪರ್ಣನ ಆಸ್ಥಾನದಲ್ಲಿ ಸಾರಥಿಯ ಕೆಲಸ ಮಾಡುತ್ತಾನೆ. ಸೂಪರ್ ಮ್ಯಾನ್ ಕ್ರಿಪ್ಟಾನ್ ಎಂಬ ಗ್ರಹದಿಂದ ಭೂಮಿಗೆ ಬಂದು, ಇಲ್ಲಿನ ವಾತಾವರಣದಲ್ಲಿ ಅತಿಬಲನಾಗಿದ್ದರೂ ಕ್ಲಾರ್ಕ್ ಕೆಂಟ್ ಎಂಬ ಮಾರುವೇಷದಲ್ಲಿ ಸಾಮಾನ್ಯರ ಹಾಗೆ ವರ್ತಿಸಬೇಕಾಗಿ ಬರುತ್ತದೆ.

ಇಂಥ ಪರಿಸ್ಥಿತಿಯ ವೈಪರೀತ್ಯಗಳು ಓದುಗರಲ್ಲಿ ಒಂದು ತಾದಾತ್ಮ್ಯವನ್ನು ಒದಗಿಸಲು ಸಹಾಯಮಾಡುತ್ತದೆ. ಇಂಥ ಸರ್ವಶಕ್ತರೂ ಸಾಮಾನ್ಯರ ಹಾಗಿರುವರಲ್ಲಾ ಎಂಬ ಆಶ್ಚರ್ಯ. ಓದುಗ ತಾನು ಸಾಮಾನ್ಯನಾಗಿದ್ದರೂ ತನ್ನಲ್ಲಿ ಅಲೌಕಿಕ ಶಕ್ತಿಯಿರಬಹುದೆಂಬ ಭಾವನೆಗೂ ಕಾರಣವಾಗುತ್ತದೆ. ಓದುಗ ತಾನೂ ಒಂದು ಬೂದಿ ಮುಚ್ಚಿದ ಕೆಂಡದ ಹಾಗೆಂದು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

ಒಂದು ಕಥಾಭಾಗ ರುಚಿಸಬೇಕೆಂದರೆ ಅಲ್ಲಿನ ಪಾತ್ರಗಳಲ್ಲಿ ಓದುಗನು ಸಹಮತಿಯನ್ನುಳ್ಳವನಾಗಿರಬೇಕು, ತನ್ನನ್ನು ತಾನೇ ಅವುಗಳೊಡನೆ ಗುರುತಿಸಿಕೊಳ್ಳಲು ಸಾಧ್ಯವಾಗಬೇಕು. ತಾನೇ ಆ ಪಾತ್ರವಾಗದಿದ್ದರೆ ಆ ಪಾತ್ರಕ್ಕೆ ಸಹಾನುಭೂತಿಯನ್ನು ತೋರಿಸುವ ಇನ್ನೊಂದು ಪಾತ್ರವಾಗಿದ್ದರೂ ಪರವಾಗಿಲ್ಲ. ಖಲನ ಪಾತ್ರಗಳಲ್ಲಿ ಸಾಮಾನ್ಯ ಓದುಗರು ತಮ್ಮನ್ನು ತಾವು ಗುರುತಿಸಿಕೊಳ್ಳುವುದು ಕಷ್ಟ. ಉತ್ತಮ ಪಾತ್ರಗಳೊಡನೆ ಗುರುತಿಸಿಕೊಳ್ಳಲು ಸಾಧ್ಯವಾದರೆ ಕಥೆಯೂ ಹೆಚ್ಚು ಜನಪ್ರಿಯವಾಗುತ್ತದೆ. ಪಾತ್ರಗಳು ಉತ್ತಮವಾಗಿದ್ದರೂ, ಸಶಕ್ತವಾಗಿದ್ದರೂ ಸಂದರ್ಭವಶಾತ್ ಆಕಾಶದಲ್ಲಿ ಹಾರಾಡದೆ ತಮ್ಮಂತೆಯೇ ಭೂಮಿಯ ಮೇಲೆ ಇದ್ದರೆ ಅಥವಾ ಇರಲೇ ಬೇಕಾಗಿದ್ದರೆ? ಸ್ವಲ್ಪ ಹೆಚ್ಚಿನ ತಾದಾತ್ಮ್ಯ ದೊರೆಯಲು ಇದು ಪ್ರಾಯಃ ಸಹಾಯ ಮಾಡಬಹುದು, ಅಲ್ಲವೇ?

ಬೇರೆ ಕಥೆಗಳಲ್ಲೂ ಹಾಗೆಯೇ. ರಾಜನೊಬ್ಬ ಮಾರುವೇಷದಲ್ಲಿ ಸಂಚರಿಸುವ ಕಥೆಗಳು ಮನಸ್ಸಿಗೆ ರುಚಿಸುತ್ತವೆ. ಬಾಷಾ ಎಂಬ ತಮಿಳು ಚಿತ್ರದಲ್ಲಿ ರಜನಿಕಾಂತ್ ಗೆ ಇಂಥದೇ ಪಾತ್ರ. ಆಮೇರಿಕದಲ್ಲಂತೂ ಪ್ರತಿಯೊಬ್ಬ "ಸೂಪರ್ ಹೀರೋ"ವಿಗೂ ಒಂದು ಸಾಮಾನ್ಯ ನಾಗರಿಕನ ಪಾತ್ರವಿರುತ್ತದೆ. ಹೀಗೆಯೇ ಬಹಳಷ್ಟು ಕಥೆ ಚಲನಚಿತ್ರಗಳಿವೆ. ಇವುಗಳ ವಿಶೇಷ ಜನಪ್ರಿಯತೆಗೆ ನಾನು ಹೇಳಿದ ಸಂಗತಿಯೂ ಕಾರಣವಿರಬಹುದೇ?

ಆದರೆ ಇದನ್ನು ಚೆನ್ನಾಗಿ ಉಪಯೋಗಿಸುವುದು ಕಥೆಗಾರನ ಪ್ರತಿಭೆಗೆ ಬಿಟ್ಟಿದ್ದು. ಕಥೆಗಾರನ ಪ್ರತಿಭೆ ಹೆಚ್ಚಿಲ್ಲದಿದ್ದರೆ ಆ ಸಂಗತಿಗಳಲ್ಲಿನ ರಸವನ್ನು ಚೆನ್ನಾಗಿ ಮೂಡಿಸಲು ಸಾಧ್ಯವಾಗುವುದಿಲ್ಲ.

ನಾನು ಹೇಳಿದ್ದರ ಬಗ್ಗೆ ಇದನ್ನು ಓದಿದವರು ಸ್ವಲ್ಪ ಯೋಚಿಸಿ ನೋಡಿದರೆ ಚೆನ್ನಾಗಿರುತ್ತದೆ. ಅಥವಾ ನನಗೆ ಕಾಣದ ಇನ್ನೊಂದು ಪ್ರಬಲವಾದ ಕಾರಣವಿದ್ದರೆ ಅದನ್ನು ತಿಳಿಯಲು ಇಚ್ಛಿಸುತ್ತೇನೆ. ಪ್ರತಿಕ್ರಯಿಸಿದರೆ ಬಹಳ ಸಂತೋಷ.

|| ಇತಿ ಶಮ್ ||

Thursday, August 03, 2006

Great write up on Malgudi Days by Jhumpa Lahiri

Got this via Churumuri.

You can find the full article here on Boston Review.

Very well written, of course.

Makes me want to read Malgudi days all over again. I think I will do that soon.