Showing posts with label Shirdi Excursion. Show all posts
Showing posts with label Shirdi Excursion. Show all posts

Thursday, October 25, 2007

ಸಾಈ-ಶಿವಾಜಿಯರ ನಾಡಿನಲ್ಲಿ - ಭಾಗ ೨

ಕಳೆದ ಭಾಗದಲ್ಲಿ ಶಿಂಗನಾಪುರದ ದಾರಿಯಲ್ಲಿದ್ದೆವು.

ಶನಿಶಿಂಗನಾಪುರವನ್ನು ತಲುಪಿದಾಗ ಸರಿ ಸುಮಾರು ಹತ್ತೂವರೆ ಘಂಟೆ. ಶನೈಶ್ಚರನ ದೇವಾಲಯವೇ ಇಲ್ಲಿನ ಮುಖ್ಯ ಭಾಗ. ಇಲ್ಲಿನ ಒಂದು ವಿಚಿತ್ರವೆಂದರೆ ಮನೆಗಳಿಗೆ ಬಾಗಿಲುಗಳಿಲ್ಲದಿರುವುದು. ಒಂದು ಯಾತ್ರಾಸ್ಥಳ ಅಥವಾ ದೇವಾಲಯ ಹಳೆಯದಾದಷ್ಟೂ ನನ್ನ ಆಸಕ್ತಿ ಹೆಚ್ಚುತ್ತದೆ. ಇದು ನನ್ನ ಸಮಸ್ಯೆಯೆಂದೇ ನನ್ನ ಭಾವನೆ. ಹಾಗೆ ನೋಡಿದಾಗ, ಎಷ್ಟು ವರ್ಷಗಳಿಂದ ಈ ಸ್ಥಳ ಖ್ಯಾತವಾಗಿದೆಯೋ ನನಗೆ ತಿಳಿಯದು; ಆಗ ಆ ಕುತೂಹಲ ಕೂಡ ಆಗಿರಲಿಲ್ಲ.

ಗಾಡಿಯಿಂದ ಇಳಿದ ಕ್ಷಣ ನಮಗೆ ಕಂಡವರು ಕಾವಿ ಬಣ್ಣದ ಒದ್ದೆ ಬಟ್ಟೆಯನುಟ್ಟ ಹಲವು ಪುರುಷಭಕ್ತರು. ಇವರೆಲ್ಲರೂ ಬಾಡಿಗೆಗೆ ತೆಗೆದ ಕಾವಿಬಟ್ಟೆಯನ್ನುಟ್ಟು ಅಲ್ಲೇ ನಲ್ಲಿಯಿಂದ ತೊಟ್ಟಿಕ್ಕುವ ನೀರಲ್ಲಿ ಮೀಯುತ್ತಾರೆ. ದೇವಾಲಯದ ಒಳಗೆ ಹೋದಾಗ ಮೈ ಸ್ವಲ್ಪ ಒದ್ದೆಯಿರಬೇಕು ಎನ್ನುವುದು ಇಲ್ಲಿನ ಪದ್ಧತಿ. ಒದ್ದೆ ಬಟ್ಟೆಯನ್ನುಟ್ಟು ಎಳ್ಳೆಣ್ಣೆಯನ್ನು ಕೊಳ್ಳುತ್ತಾರೆ - ಶನೈಶ್ಚರನ ಮೂರ್ತಿಯ ಮೇಲೆ ಅಭಿಷೇಕ ಮಾಡಲು. ಈ ಎಣ್ಣೆಯ ಪ್ರಮಾಣ ಒಂದು ತಮಾಷೆ. ಒಬ್ಬರಿಗೆ "ಶನಿಕಾಟ" ಹೆಚ್ಚಿದಷ್ಟೂ ಹೆಚ್ಚಿನ ಎಣ್ಣೆಯಿಂದ ಅಭಿಷೇಕ ಮಾಡುತ್ತಾರೆ. ೫ ಲೀಟರಿನ ಎಣ್ಣೆಯ ಡಬ್ಬವನ್ನು ಒಯ್ದದ್ದನ್ನು ನಾನೇ ನೋಡಿದೆ.

ನಮ್ಮ ಗುಂಪಿನಲ್ಲಿ ಯಾರಿಗೂ ಬಟ್ಟೆ ಕಳಚಿ ಸ್ನಾನ ಮಾಡುವ ಮನಸ್ಸಾಗಲಿಲ್ಲ. ನಮ್ಮ ಚಾಲಕ ಈ ದೇವರಿಗೆ ನಡೆದುಕೊಳ್ಳುವವನೆಂದು ಕಾಣುತ್ತದೆ. ಆದ್ದರಿಂದ ಅವನು ನೀವು ಒದ್ದೆಬಟ್ಟೆ ಉಟ್ಟು ದೇವರ ಮೇಲೆ ಎಣ್ಣೆ ಹಾಕಲೇ ಬೇಕು ಎಂದು ಹಠ ಮಾಡಿದ. ಇದರಿಂದ ನಮಗೆ ಎಣ್ಣೆಯನ್ನು ದೇವರ ಮೇಲೆ ಹಾಕದೆ ಹೋದರೆ ಅಪಚಾರವೋ ಏನೋ ಎಂಬ ಭಾವನೆ ಬಂದಿತು. ಆದ್ದರಿಂದ ಒಂದು ಹತ್ತು ರೂಪಾಯಿಗಳ ಮಟ್ಟಿಗೆ ಗಂಡಸರು ಪ್ರತಿಯೊಬ್ಬರೂ ಒಂದು ಎಣ್ಣೆಯ ಸಣ್ಣ ಚೀಲ ಕೊಂಡೆವು. ಅಂಗಿ ಧರಿಸಿದ್ದ ನಮಗೆ ಮೂರ್ತಿಯ ನಿಕಟವಾದ ದರ್ಶನ ಸಿಗುತ್ತಿರಲಿಲ್ಲ. ಆದ್ದರಿಂದ ದೊಡ್ಡ ಸಾಲಿನ ಹಲವು ಭಕ್ತರಲ್ಲಿ ಕೆಲವರಿಗೆ ನಮ್ಮ ಚೀಲಗಳನ್ನು ಕೊಟ್ಟೆವು. ಅವರೂ ಅದನ್ನು ದೇವಮೂರ್ತಿಯ ಮೇಲೆ ಅಭಿಷೇಕ ಮಾಡಿದರು. ಅಷ್ಟಕ್ಕೆ ನಮಗೆ ಮನಸ್ಸಿನಲ್ಲಿ ಒಂದು ನಿರಾಳವಾದ ಭಾವನೆ. ಆ ಮೂರ್ತಿಯಾದರೋ - ಯಾವ ವಿಶೇಷವಾದ ಶಿಲ್ಪವೂ ಅಲ್ಲ. ಸ್ವಯಂಭೂ ಅಥವಾ ಉದ್ಭವ ಮೂರ್ತಿ ಒಂದು ವಿಚಿತ್ರಾಕಾರದ ಕೃಷ್ಣಶಿಲೆ. ಇದನ್ನೇ ಜನರು ಭಕ್ತಿಯಿಂದ ಶನೈಶ್ಚರನೆಂದು ಆರಾಧಿಸುವುದು. ಭಕ್ತಿಭಾವನೆಯೇ ತಾನೆ ಯಾವ ಆಕಾರಕ್ಕೂ ದೈವತ್ವ ಕೊಡುವುದು?

ದೇವಾಲಯದಲ್ಲಿ ಬಹಳಷ್ಟು ಜನರಿರಲಿಲ್ಲ. ಅರ್ಧಘಂಟೆಯಲ್ಲೇ ದರ್ಶನ ಪೂರೈಸಿ ಗಾಡಿ ಹತ್ತಿದೆವು; ಔರಂಗಾಬಾದಿನೆಡೆಗೆ ಪಯಣಿಸಿದೆವು.





ಶನಿಶಿಂಗನಾಪುರದ ದೇವಾಲಯದ ಮುಂಬಾಗಿಲು

ಮಧ್ಯಾಹ್ನ ಹನ್ನೆರಡೂವರೆಗೆ ನಮ್ಮ ಚಾಲಕ ಬೀಬೀ-ಕಾ-ಮಕ್ಬರಾ ಎಂಬೆಡೆ ನಿಲ್ಲಿಸಿದ. ಈ ಜಾಗದಲ್ಲಿ ತಾಜ ಮಹಲಿನ ಒಂದು "ಮಿನಿ" ರೂಪ ನೋಡಲು ಸಿಗುತ್ತದೆ. ಔರಂಗಜೇಬನ ಪತ್ನಿ (ಬೀಬಿ)ಯ ಗೋರಿ (ಮಕ್ಬರಾ) ಇರುವುದು ಇಲ್ಲಿಯೇ. ಅವಳು ಬದುಕಿರುವಾಗಲೇ ಕಟ್ಟಡವನ್ನು ಕಟ್ಟಿಸಿದ್ದರಂತೆ; ಈಕೆ ಸತ್ತ ಮೇಲೆ ಇಲ್ಲಿ ಮಣ್ಣು ಮಾಡೋಣ ಎಂದು. ಇದು ಕಟ್ಟು ಕಥೆಯೋ ಅಥವಾ ಮತ್ತೊಮ್ಮೆ ಇತಿಹಾಸಜ್ಞ(ಘ್ನ?)ರು ಮಾಡಿರುವ "ಆವರಣ"ವೋ ತಿಳಿಯದು. ಏನನ್ನಿಸಿರಬೇಕು ಆಕೆಗೆ?

"ನೋಡಿ; ಈ ಗೋರಿಯನ್ನು ಇನ್ನೂ ಸ್ವಲ್ಪ ಆಳ ಮತ್ತು ಅಗಲ ಮಾಡಬೇಕಲ್ಲ....ನನಗೆ ಹಾಸಿಗೆಯಲ್ಲಿ ಸ್ವಲ್ಪ ಹೊರಳಾಡೋ ಅಭ್ಯಾ(ಯೋಚಿಸಿ).. ಪರವಾಗಿಲ್ಲ ಬಿಡಿ" - ಹೀಗನ್ನಿಸಿರಬಹುದೇ?


ಮೊದಲೇ ರಣಬಿಸಿಲು. ಎಳೆಯ ಮಕ್ಕಳು ನಮ್ಮೊಡನೆ ಬಂದದ್ದರಿಂದ ಎಲ್ಲರೂ ಅವರ ಬಗ್ಗೆ ಕಾಳಜಿ ಇಟ್ಟವರೇ! ಆದರೆ ನಮಗೆ ಒಳ್ಳೆಯ ಬೇವಿನ ಮರದ ನೆರಳು ಸಿಕ್ಕಿತು. ಅದರ ಕೆಳಗೆ ವ್ಯಾನ್ ನಿಲ್ಲಿಸಿ ನಾಲ್ವರು ನಾವು ಟಿಕೆಟ್ಟು ಪಡೆದು ಒಳಗೆ ನಡೆದೆವು. ಮೊದಲು ಒಂದು ಪ್ರವೇಶದ್ವಾರ. ಇದರ ಮತ್ತು ಗೋರಿಯಿರುವ ಕಟ್ಟಡದ ನಡುವೆ ಮುಕ್ತ ಪ್ರದೇಶ. ಆ ಪ್ರದೇಶದಲ್ಲಿ ಒಂದು ಆಯತಾಕಾರದ ಚಿಲುಮೆಗಳಿಗೆ ಮಾಡಿದ ಜಾಗ. ಇನ್ನು ಹೆಚ್ಚು ವಿವರ ಬೇಡ. ಇದೋ ಕೆಳಗಿದೆ - ಚಿತ್ರ. ಇದರಿಂದ ಸಾವಿರ ಪದಗಳು ಮಿಕ್ಕಿದುವು!



ಬೀಬೀ ಕಾ ಮಖ್ಬರಾ

ಇದು "ಮಿನಿ" ತಾಜ್ ಎಂದೇ ಹೆಸರು ಪಡೆದಿದ್ದರೂ ಅಷ್ಟು ಮಿನಿಯೇನಲ್ಲ. ಹೀಗಾಗಿ ತಾಜ್ ಮಹಲನ್ನು ಕಂಡಿಲ್ಲದ ನನಗೆ ತಾಜ್ ಇನ್ನೆಷ್ಟು ಭವ್ಯವಾಗಿರಬಹುದೋ ಎಂದೆನಿಸಿತು. ಇಂಡೋ-ಸ್ಯಾರಸೆನಿಕ್ ಎಂದು ಕರೆಸಿಕೊಳ್ಳುವ ಕಟ್ಟಡದ ಮಾದರಿಯಲ್ಲಿ ಈಗಲೂ ಅಳಿಸದ ಕುಸುರಿ ಕೆಲಸ ಕಂಡಿತು. ಪಿ.ಎನ್.ಓಕರ ತೇಜೋಮಹಾಲಯವೂ ನೆನಪಿಗೆ ಬಂದು ಇದೇನಾದರೂ ದೇವಾಲಯವಿದ್ದಿರಬಹುದೇ ಎಂದು ಶಂಕಿಸುತ್ತ ಕಂಡೆ. ಓಕರ ಈ ಕಲ್ಪನೆ ನನಗೆ ಅಷ್ಟು ಇಷ್ಟವಿಲ್ಲ - ಏಕೆಂದರೆ ದೇವಾಲಯಗಳನ್ನು ಸಾಮಾನ್ಯವಾಗಿ ಧ್ವಂಸಮಾಡಿದವರು ಇಸ್ಲಾಂ ಮತಾಂಧರು. ಅವರು ದೇವಾಲಯದ ಕಟ್ಟಡವೊಂದನ್ನು ಬಹುತೇಕ ಹಾಗೆಯೇ ಬಿಟ್ಟಿದ್ದಾರೆ ಎಂದರೆ ನಂಬಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಚೆನ್ನಾದ ಕಟ್ಟಡ. ಆ ದಿನಗಳಲ್ಲಿ ಹೇಗಿತ್ತೋ!

ಒಬ್ಬ ಬಂದು ನಿಮ್ಮ ಗೈಡಾಗುತ್ತೇನೆ. ಮುವ್ವತ್ತು ರೂಪಾಯಿ ಕೊಡಿ ಎಂದು ದುಂಬಾಲು ಬಿದ್ದ. ನಾನು ಹೋಗಲಿ ಪಾಪ ಎಂದು ಒಪ್ಪಿದೆ. ಆ ಪ್ರಜೆ ಹಿಂದಿಯಲ್ಲಿ ಹೊರಗಿನ ಮಂಟಪದ ಬಳಿ ನಿಂದು ಒಂದೈದು ನಿಮಿಷ ಅಲ್ಲೇ ಚೂರು-ಪಾರು ಹೇಳಿ ಹೊರಟೇಬಿಟ್ಟ! ಅಲ್ಲಿ ದೂರದಲ್ಲಿ ಗೋರಿ ಇದೆ; ಹೋಗಿ ನೋಡಿ ಅಂದ! ಇವನೆಂಥ ಗೈಡು?

ಇಲ್ಲಿಂದ ನಾವು ಎಲ್ಲೋರದ ಕಡೆಗೆ ಹೊರಟೆವು. ದಾರಿಯಲ್ಲಿ ದೌಲತಾಬಾದ್ ಅಥವಾ ದೇವಗಿರಿ ಕಂಡಿತು. ಈ ಐತಿಹಾಸಿಕಸ್ಥಳಕ್ಕೇ ಮಹಮದ್ ಬಿನ್ ತುಘಲಕ್ ದೆಹಲಿಯಿಂದ ರಾಜಧಾನಿಯನ್ನು ಬದಲಿಸಲು ಇಷ್ಟ ಪಟ್ಟಿದ್ದು. ನಂತರ ಸೋತು ವಾಪಸಾದದ್ದು. ಭವ್ಯವಾದ ಬೆಟ್ಟದ ಮೇಲೆ ಕೋಟೆ ಕಂಡಿತು. ಬೆಟ್ಟವೇ ಕೋಟೆಯಾಗಿದೆ. ಆದರೆ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ನಮ್ಮ ಚಾಲಕ-ಮಹಾಶಯ ಒಂದು ಛಾಯಾಚಿತ್ರ ತೆಗೆಯುವಷ್ಟು ಸಮಯ ಕೂಡ ಅಲ್ಲಿ ನಿಲ್ಲಿಸಲಿಲ್ಲ. ಅದನ್ನು ಬಿಟ್ಟು ಮುಸುಕಿನ ಜೋಳ ಮಾರುವ ಕಡೆ, ಕೋಟೆಯಿಂದ ದೂರ ತಂದು ನಿಲ್ಲಿಸಿದ. ಇಂಥ ಜಾಗದ ಅಷ್ಟು ಹತ್ತಿರವಿದ್ದ ಆ ಚಾಲಕನಿಗೆ ಅವನದೇ ಜೀವನ. ನಮ್ಮ ದೃಷ್ಟಿಕೋನ ಅವನಿಗೆ ಹೇಗೆ ಬರಬೇಕು? ಸ್ವಲ್ಪ ಬೇಜಾರು ಮಾಡಿಕೊಂಡೇ ಎಲ್ಲೋರದ ಕಡೆ ಸಾಗಿದೆವು.

ನಮ್ಮ ಚಾಲಕನಿಗೆ ಪ್ರಿಯವಾದ ಧಾಬಾದ ಬಳಿ ನಿಲ್ಲಿಸಿದ. ಅಲ್ಲಿ ಮಹಾರಾಷ್ಟ್ರದ ಥಾಲಿ ತಿನ್ನೋಣವೆಂದು ಆರಿಸಿದೆ. ರಸ್ತೆಯ ಕಡೆಯ ಜಾಗವಾದರೂ ರುಚಿಗೆ ತೊಂದರೆಯೇನಿರಲಿಲ್ಲ. ಬೆಳಗ್ಗೆ ಹೆಚ್ಚೇನೂ ತಿನ್ನದಿದ್ದ ನನ್ನ ಮಗ ಕೊನೆಗೆ ಸ್ವಲ್ಪ ಊಟ ಮಾಡಿದ. ಸ್ವಲ್ಪ ಸಮಾಧಾನ ನಮೆಗೆಲ್ಲ. ಆ ಜಾಗದ ಬಳಿ ಭದ್ರ ಮಾರುತಿ ಎಂಬ ಮಲಗಿರುವ ಆಂಜನೇಯನ ದೇವಾಲಯವಿದೆ. ಸಮಯಾಭಾವದಿಂದ ನಾವಲ್ಲಿಗೆ ಹೋಗಲಿಲ್ಲ.

ಸುಮಾರು ಎರಡೂವರೆ ಮೂರುಘಂಟೆಗೆ ಎಲ್ಲೋರಾ ತಲುಪಿದೆವು. ರಾಷ್ಟ್ರಕೂಟರು (ಇವರು ಕನ್ನಡಿಗರೆಂದು ನನಗೆ ಹೆಮ್ಮೆ) ಆರನೆ ಅಥವಾ ಏಳನೇ ಶತಮಾನದಲ್ಲಿ ಬೆಟ್ಟಗಳನ್ನು ಕಡಿಸಿ ಮಾಡಿಸಿದ ಗುಹೆಯ ದೇವಾಲಯಗಳು. ಮೂವತ್ತೈದು ನಲವತ್ತು ಗುಹೆಗಳಿವೆಯೋ ಏನೋ. ನಾವು ಮೊದಲಿಗೆ ಮೂವತ್ತೆರಡನೆಯೋ ಮೂವತ್ತುನಾಲ್ಕನೆಯ ಗುಹೆಗೋ ಹೋದೆವು. ಇಲ್ಲೂ ಈ ಗುಹೆಗಳ ಲಾಂಛನದಂತಿರುವ ಒಬ್ಬ ಗಜರಾಜನನ್ನು ಕಂಡೆವು. ಅಲ್ಲಿ ನೋಡಿದಾಗ ನಮಗೆ ಪದ್ಮಾಸನಸ್ಥರಾದ ಮೂರ್ತಿಗಳು ಕಂಡವು. ಬುದ್ಧನ ಮೂರ್ತಿಗಳೋ, ಜಿನ ಮೂರ್ತಿಗಳೋ ಮೊದಲಿಗೆ ತಿಳಿಯಲಿಲ್ಲ. ನಂತರ ಒಂದೊಂದೇ ವಿಗ್ರಹವನ್ನು ಗಮನಿಸಿದಾಗ ಒಂದರ ಮೇಲೆಯೂ ಬಟ್ಟೆಯ ಆಕಾರ ಕಾಣಿಸಲಿಲ್ಲ. ಇದರಿಂದ, ಇವು ಜೈನ ದೇವಾಲಯಗಳೇ ಎಂಬ ನಿರ್ಧಾರಕ್ಕೆ ಬಂದೆ. ಏಕೆಂದರೆ ಬುದ್ಧನ ವಿಗ್ರಹಗಳಲ್ಲಿ ಸಾಮಾನ್ಯ ಒಂದು ಉತ್ತರೀಯದ ರೀತಿ ಬಟ್ಟೆ ಇರುತ್ತದೆ. ಜಿನರಿಗೆ ಬಟ್ಟೆ optional. ನಾನು ಯೋಚಿಸಿದ್ದೇ ಸರಿಯೆಂದು ೨೪ ತೀರ್ಥಂಕರರ ಒಂದು ಪಟ್ಟಿಯನ್ನು ನೋಡಿದಾಗ ಖಚಿತವಾಯ್ತು.

ಇಲ್ಲಿನ ಶಿಲ್ಪಗಳಲ್ಲಿ ನಮ್ಮ ಬೇಲೂರು-ಸೋಮನಾಥಪುರಗಳಷ್ಟು ಕುಸುರಿ ಕೆಲಸವಿಲ್ಲ. ಆದರೆ ಸ್ವಲ್ಪ ಗಟ್ಟಿತನವನ್ನು ತೋರುತ್ತವೆ. ಅಷ್ಟು ಸುಕುಮಾರವಾಗಿ ಕಾಣುವುದಿಲ್ಲ. ಇಲ್ಲಿನ ಇಂದ್ರ-ಇಂದ್ರಾಣಿಯರು ಎಲ್ಲ ಕಡೆ ದ್ವಾರಪಾಲಕರ ಹಾಗೆ ಶಿಲ್ಪಿತರಾಗಿದ್ದಾರೆ. ಇಂದ್ರ ವೇದದ ಮುಖ್ಯದೇವತೆಗಳಲ್ಲಿ ಒಬ್ಬ. ಇವನನ್ನು ಜೈನರು ತಮ್ಮ ತೀರ್ಥಂಕರರ ದ್ವಾರಪಾಲಕನ ಹಾಗೆ ಮಾಡಿದ್ದಾರೆಂದರೆ ವೇದಮತಕ್ಕಿಂತ ಜಿನಮತ ದೊಡ್ಡದೆಂಬಂತೆ ಧ್ವನಿ. ಆದರೆ ಹಿಂದೂ ದೇವಾಲಯಗಳಲ್ಲಿ ಅಷ್ಟು ಭವ್ಯವಾದ ಇಂದ್ರನ ಶಿಲ್ಪವನ್ನು ನಾನು ನೋಡಿಯೇ ಇಲ್ಲ. ಅಲ್ಲಲ್ಲಿ ಧ್ಯಾನಮಾಡುವ ಸ್ಥಾನಗಳಿದ್ದ ಹಾಗೆ ಕಂಡವು. ದಿಗಂಬರರೇ ಇಲ್ಲಿದ್ದದ್ದು ಎಂದು ನನಗನ್ನಿಸುತ್ತದೆ.

ಅಜಂತಾದಲ್ಲಿ ವರ್ಣಚಿತ್ರಗಳ ಬಗ್ಗೆ ಕೇಳಿದ್ದೆ. ಆದರೆ ಎಲ್ಲೋರಾದಲ್ಲೂ ಅಲ್ಲಲ್ಲಿ ಮಾಸಲುಬಣ್ಣದ ಸುಂದರ ಚಿತ್ರಗಳಿವೆ. ಅವುಗಳನ್ನು ಅಲ್ಲೇ ಇರುವ ಮೇಲ್ವಿಚಾರಕರು ತಮ್ಮ ಬಳಿ ಇರುವ ವಿದ್ಯುದ್ದೀಪದ ಬೆಳಕಿನಿಂದ ತೋರಿಸುತ್ತಾರೆ. ಆಮೇಲೆ ಸ್ವಲ್ಪ ಅವರಿಗೆ ದುಡ್ಡು ಕೊಡಬೇಕು. ಆದರೆ ಆ ದುಡ್ಡು ನಿಜಕ್ಕೂ ಸಾರ್ಥಕವಾಯ್ತು. ಕಾಣದಂಥ ಬಣ್ಣದ ಚಿತ್ರಗಳು ಕಂಡವು. ಇಂದ್ರಸಭೆಯಲ್ಲಿ ನೀಲಾಂಜನೆಯ ನೃತ್ಯದ ಹಾಗೆ ಕಂಡ ಚಿತ್ರ ಕಂಡಿತು. (ಈ ಘಟನೆಯಿಂದಲೇ ಆದಿನಾಥ ಋಷಭದೇವನಿಗೆ ವೈರಾಗ್ಯಪ್ರಾಪ್ತಿಯಾದದ್ದು; ಅವನು ಜಿನನಾದದ್ದು).


ಬಾಹುಬಲಿಯ (?) ವರ್ಣಚಿತ್ರ

ಇಲ್ಲಿಂದ ಒಂದು ಶಿವನ ಗುಹಾದೇವಾಲಯಕ್ಕೆ ಹೋದೆವು (೧೭ನೇ ಗುಹೆ?). ಇಲ್ಲಿ ಪ್ರದಕ್ಷಿಣೆ ಮಾಡಿದಾಗ ದಕ್ಷಯಜ್ಞವಿನಾಶವೇ ಮೊದಲ್ಗೊಂಡು ಕೈಲಾಸದಲ್ಲಿ ಆನಂದವಾಗಿರುವ ಶಿವ-ಪಾರ್ವತಿಯರ ವಿವಿಧ ಉಬ್ಬು ಶಿಲ್ಪಗಳು ಕಂಡವು. ಇದರ ಪಾರ್ಶ್ವದಲ್ಲಿಯೇ ಬೆಟ್ಟದ ಮೇಲಿಂದ ಝರಿಯೊಂದು ಕೆಳಗಿನ ಕೊಳಕ್ಕೆ ಧುಮುಕುತ್ತಿತ್ತು. ಈ ದೃಶ್ಯ ಚೇತೋಹಾರಿಯಾದರೂ ಇದನ್ನು ಅನುಭವಿಸುವುದಕ್ಕೆ ನಮಗೆ ಸಮಯವಿಲ್ಲದೇ ಹೋಯ್ತಲ್ಲ; ನಾವೀಗಲೇ ಹೊರಡಬೇಕಲ್ಲ ಎಂಬ ಖಿನ್ನತೆಯೂ ಉಂಟಾಯ್ತು.



ಗುಹೆಯೊಂದರ ಪಕ್ಕದಲ್ಲಿ ಬೀಳುತ್ತಿರುವ ಝರಿ

ಎರಡು-ಮೂರು ಘಂಟೆಗಳಲ್ಲಿ ನೋಡುವಂಥ ಸ್ಥಾನವಲ್ಲ ಎಲ್ಲೋರ. ಒಂದು ವಾರವಾದರೂ ಇದ್ದು ಒಂದೊಂದು ಗುಹೆಯನ್ನೂ ಅರ್ಧ ದಿನ ನೋಡುವಷ್ಟಿದೆ ಇಲ್ಲಿ. ಅದೂ ನನ್ನಂಥ ತಿಳಿಯದವರಿಗೆ. ಸಂಶೋಧನೆ ಮಾಡುವವರನ್ನಂತೂ ಬಿಡಿ - ಒಂದು ಚಿತ್ರದ ಅಥವಾ ಶಿಲ್ಪದ ಬಗ್ಗೆಯೇ ಒಂದು ಪೇಪರ್ ಬರೆದುಬಿಟ್ಟಿರುತ್ತಾರೆ.

ಇದಾದ ಮೇಲೆ ಎಲ್ಲೋರದ ಕೇಂದ್ರವೆಂದು ಪರಿಗಣಿಸಲ್ಪಡುವ ಕೈಲಾಸನಾಥದೇವಾಲಯಕ್ಕೆ ಬಂದೆವು. ಈ ದೇವಾಲಯದ ರಿಪೇರಿ ಕೆಲಸ ನಡೆಯುತ್ತಿತ್ತು. ಒಳಗೆ ನಡೆದಾಗ ಒಂದು ಗಜಲಕ್ಷ್ಮಿಯ ಉಬ್ಬು ಶಿಲ್ಪ ಕಾಣುತ್ತದೆ - ಸರಿಯಾಗಿ ಮುಖ ಗೋಚರಿಸುವುದಿಲ್ಲ. ಇದರ ಎಡಕ್ಕೆ ಸಾಗಿದಾಗ ದೇವಾಲಯದ ಒಳ ಆವರಣ ಕಾಣಿಸುತ್ತದೆ. ಇಲ್ಲಿ ಭವ್ಯವಾದ ಎರಡು ಸ್ತಂಭಗಳಿವೆ. ವಿಜಯಸ್ತಂಭಗಳೋ ಅಥವಾ ರಾತ್ರಿಯ ವೇಳೆ ಬೆಳಕಿಗಾಗಿ ಉಪಯೋಗಿಸಲ್ಪಡುತ್ತಿದ್ದ ಸ್ತಂಭಗಳೋ ತಿಳಿಯದು. ಎಡ ಕಂಭದ ಮುಂದೆ ಬಂದರೆ ಮೆಟ್ಟಿಲುಗಳು ಕಾಣುವವು. ಇವನ್ನು ಏರುತ್ತ ಹೋದಾಗ ಗರ್ಭಗುಡಿಯ ಮಟ್ಟಕ್ಕೆ ಬರುತ್ತೇವೆ. ಗರ್ಭಗುಡಿಯಲ್ಲಿ ಕಗ್ಗತ್ತಲು. ಜೈನಗುಹೆಗಳಲ್ಲಿದ್ದ ಹಾಗೆ ಇಲ್ಲೂ ಮೇಲ್ವಿಚಾರಕರು ಆಸಕ್ತರಿಗೆ ದೀಪದ ಮೂಲಕ ಶಿಲ್ಪ-ಚಿತ್ರಗಳ ದರ್ಶನ ಮಾಡಿಸುತ್ತಿದ್ದರು. ಗರ್ಭಗುಡಿಯ ಬಾಗಿಲ ಎದುರು ಒಂದು ಮಂಟಪ. ಅಲ್ಲೇ ನಂದಿಯಿರುವುದು. ಪುಟ್ಟ ನಂದಿ.

ಗರ್ಭಗುಡಿಯ ಗರ್ಭದಲ್ಲಿ ತನಗೂ ಈ ಶಿಲ್ಪವೈಭವೋಪೇತ ದೇವಾಲಯಕ್ಕೂ ಸಂಬಂಧವೇ ಇಲ್ಲವೆಂಬಂತೆ ಲಿಂಗರೂಪಿ ಶಿವನಿದ್ದಾನೆ. ಕಲೋಪಾಸಕರಿಗೆ ಇದೇನು ಈ ಸಾದಾ ಲಿಂಗಕ್ಕೆ ಇಷ್ಟು ವೈಭವದ ದೇವಾಲಯವೇ ಅನ್ನಿಸಬಹುದು. ಆದರೆ ಈ ವಿರೋಧಾಭಾಸದಲ್ಲೇ ಸೊಗಸಿರುವುದು. ಗೀತೆಯಲ್ಲಿನ "ಪದ್ಮಪತ್ರಮಿವಾಂಭಸಾ"ದ ಶಿಲ್ಪರೂಪಕವಾಗಿ ಕಂಡಿತು ಈ ಸಂಗತಿ. ಶಿವನ ಸುಂದರ ಚಿತ್ರವೂ ಇದೇ ತಾನೆ? ಕೈಲಾಸದ ಬಳಿಯಲ್ಲೇ ಧನಿಕರಲ್ಲಿ ಧನಿಕನೆನಿಸಿದ ಕುಬೇರನ ಅಲಕಾವತಿಯಿದೆ. ಹೇಗಿದ್ದಿರಬೇಕು ಕುಬೇರನ ವೈಭವ? ಆದರೆ ಅದನ್ನೂ ಮೀರಿಸಿದ್ದಲ್ಲವೆ ಶಿವನ ವೈರಾಗ್ಯ-ತಪೋ-ಮೂರ್ತಿ? ಇಂಥ ಕುಬೇರನು ಮಣಿದದ್ದು ಭಸ್ಮೋದ್ಧೂಲಿತವಿಗ್ರಹನಾದ ಶ್ಮಶಾನವಾಸಿಯಾದ ಗಜಚರ್ಮಧಾರಿಯಾದ ಪರಮವೈರಾಗ್ಯಮೂರ್ತಿಯಾದ ಶಿವನಿಗಲ್ಲವೇ? ಈ ಸಂಗತಿಯನ್ನೇ ಯಾವುದೇ ಶಿವದೇವಾಲಯ ತೋರುತ್ತದೆ. ಇದು ವಿಶೇಷವಾಗಿ ಕೈಲಾಸವನ್ನೇ ನೆನಪಿಸುವ ಕೈಲಾಸನಾಥನ ದೇವಾಲಯವಾದ್ದರಿಂದ ಒಂದೆಡೆ ಶಿಲ್ಪಸೌಷ್ಠವದ ವೈವಿಧ್ಯದ ಅದ್ಭುತ ಗಾನದ ಜೊತೆ ಇನ್ನೊಂದೆಡೆ ವೈರಾಗ್ಯದ ಆಧಾರಶ್ರುತಿಯೂ ಶೋಭಿಸುತ್ತವೆ.

ಶಿಲ್ಪವೈವಿಧ್ಯದ ಮಧ್ಯೆ ನಿರ್ಲಿಪ್ತನಾಗಿರುವ ಕೈಲಾಸನಾಥ

ಇದಾದ ಮೇಲೆ ಒಳಗಣ ಪ್ರಾಕಾರದಲ್ಲಿ ಅಡ್ಡಾಡುವಾಗ ಮಹಾಭಾರತದ ಒಂದು ಉಬ್ಬು ಚಿತ್ರ ಕಂಡಿತು. ಜೊತೆಗೆ ಶಿವನ ಅವತಾರಗಳ, ವಿಷ್ಣುವಿನ ಅವತಾರಗಳ ಉಬ್ಬುಶಿಲ್ಪಗಳು ಕಾಣುತ್ತವೆ.


ಮಹಾಭಾರತದ ದೃಶ್ಯ - ಕೈಲಾಸನಾಥನ ದೇವಳದಲ್ಲಿ


ನನ್ನ ಮಗನಿಗಂತೂ ಪರಮಾನಂದವಾಗಿತ್ತು. ಓಡಲು ಆರಂಭಿಸಿದ. ಅವನನ್ನು ಹಿಡಿಯಲು ಹೋಗಿ ನನ್ನ ಪತ್ನಿಗೆ ಸಾಕಾಯ್ತು; ನನಗೂ ಸಹ. ಆದರೆ ಗುಂಪಿನಲ್ಲಿ ಹೋದದ್ದರಿಂದ ನಮ್ಮ ಅತ್ತೆಯವರೂ ಬಂದಿದ್ದರು. ಇವನನ್ನು ನೋಡಿಕೊಂಡು ಒಂದೆಡೆ ಕುಳಿತಿದ್ದರು. ಅವರು ಮೊದಲೇ ಎಲ್ಲೋರವನ್ನು ನೋಡಿದ್ದರಿಂದ ನಮಗೂ ಸುಲಭವಾಗಿ ನೋಡಿ ಬರಲು ಸಾಧ್ಯವಾಯ್ತು. ಒಂದು ಇಲಿ ಹೋದದ್ದನ್ನು ಗಮನಿಸಿ ಅದರ ಹಿಂದೆ ಓಡಲು ಮೊದಲಿಟ್ಟಿದ್ದ. ಇದನ್ನು ನೋಡಿದ ನಮಗೆಲ್ಲರಿಗೂ ನಗುವಿನ ಸುಗ್ಗಿ.

ಅಲ್ಲಲ್ಲಿ ಬಣ್ಣಗಳೂ ಕಂಡವು. ಈ ದೇವಾಲಯಕ್ಕೆ ಚೆನ್ನಾಗಿ ಬಣ್ಣ ಬಿದ್ದ ಒಂದು ಕಾಲ ಇದ್ದಿರಬೇಕು. ಆದರೂ ಒಂದು ಜಿಜ್ಞಾಸೆ ಮೂಡದೇ ಇರುವುದಿಲ್ಲ. ಇಂಥ ಭವ್ಯದೇವಾಲಯದಲ್ಲಿ ಪೂಜೆಗಳು ಯಾವಾಗ ನಿಂತವು? ಏತಕ್ಕಾಗಿ? ಪಕ್ಕದಲ್ಲಿ ಛತ್ರಗಳ ಹಾಗಿನ ದೊಡ್ಡ ಕೋಣೆಗಳಿವೆ. ಅಲ್ಲಿ ಯಾರು ಉಳಿದುಕೊಳ್ಳುತ್ತಿದ್ದರು ? ಆಗ ಎಂಥ ಸುಗಂಧದ್ರವ್ಯಗಳಿಂದ ಕೂಡಿದ ಮಂದಾನಿಲ ಪ್ರವಹಿಸುತ್ತಿದ್ದಿರಬಹುದು? ಉತ್ಸವಗಳು ಹೇಗಿದ್ದಿರಬಹುದು? ಈಗ ಬಾವುಲಿಗಳಿಂದ ನಾತ ಮಾತ್ರ ಬರುತ್ತದೆ. ಪಾಳು ಬಿದ್ದ ಮನೆ-ಮಠ-ದೇವಳಗಳನ್ನು ಕಂಡಾಗ ನನ್ನನ್ನು ಈ ಭಣಭಣ ಭಾವನೆ ಆವರಿಸಿಕೊಂಡುಬಿಡುತ್ತದೆ. ಇದನ್ನು ಕಂಡೇ ನಮ್ಮ ಭರ್ತೃಹರಿ "ಕಾಲಾಯ ತಸ್ಮೈ ನಮಃ" ಎಂದು ಉದ್ಗರಿಸಿದ್ದಿರಬಹುದು.

ಎಲ್ಲೋರದ ಗುಹಾದೇವಾಲಯಗಳ ಸುತ್ತಲೂ ಹಸುರು ಮರಗಳು ಕಾಣುತ್ತವೆ. ತಂಪು ಪಾನೀಯ, ತಿಂಡಿಗಳ ಮಾರಾಟ ದೇವಾಲಯದಿಂದ ಸಾಕಷ್ಟು ದೂರದಲ್ಲಿವೆ. ಆದರೆ ಇಲ್ಲಿನ ಶೌಚಾಲಯಗಳ ವ್ಯವಸ್ಥೆ ಬಹಳ ಶೋಚನೀಯ. ಭಾರತದೇಶ ಪ್ರವಾಸೋದ್ಯಮದಲ್ಲಿ ಮುಂದುವರೆಯಲು ಇಷ್ಟ ಪಟ್ಟಿದೆ. "Incredible India" ಜಾಹಿರಾತುಗಳು ಮುಖಕ್ಕೆ ರಾಚುವಷ್ಟು ಹೆಚ್ಚಿವೆ. ಇವನ್ನು ನೋಡಿಕೊಂಡು ಯಾರಾದರೊಬ್ಬ ಪ್ರವಾಸಿ ಬಂದರೂ (ನಮ್ಮ ದೇಶದವರೇ ಅಗಲಿ, ವಿದೇಶೀಯರೇ ಆಗಲಿ) ಅವರಿಗೆ ಮೂಲಭೂತಸೌಕರ್ಯಗಳಿಲ್ಲದಿರುವುದು ನಿಜವಾಗಿಯೂ ವಿಷಾದದ ಸಂಗತಿ.

ಇದಾದ ಮೇಲೆ ಹತ್ತಿರದಲ್ಲಿರುವ ಹನ್ನೆರಡು ಜ್ಯೋತಿರ್ ಲಿಂಗಗಳಲ್ಲಿ ಒಂದಾದ ಘೃಷ್ಣೇಶ್ವರಕ್ಕೆ ಹೋದೆವು. ಸಂಜೆ ಐದೂವರೆಯೋ ಏನೋ. ಈ ದೇವಾಲಯದಲ್ಲಿ ವಿಶೇಷವೇನೆಂದರೆ ಎಲ್ಲರೂ ಲಿಂಗದ ರೂಪದಲ್ಲಿರುವ ದೇವರನ್ನು ತಮ್ಮ ತಮ್ಮ ಇಚ್ಛಾನುಸಾರಿಯಾಗಿ ಮುಟ್ಟಿ ಪೂಜೆ ಮಾಡಬಹುದು. ಅಂಗಿಗಳನ್ನು ಗಂಡಸರು ಕಳಚಬೇಕು, ಅಷ್ಟೆ. ಪೂಜೆ ಸಾಮಗ್ರಿಗಳನ್ನು ನಮ್ಮ ಗುಂಪಿನಲ್ಲಿ ನಮ್ಮ ಅತ್ತೆಯವರೋ, ಮಾವನವರೋ ಕೊಳ್ಳುತ್ತಿದ್ದರು.ಮಿಕ್ಕೆಲ್ಲರೂ ಪೂಜೆ ಮಾಡಿದೆವು. ಗರ್ಭಗುಡಿಯೊಳಗೆ ಹಲವು ಜನರಾಗಲೇ ಮಂತ್ರ ಹೇಳುತ್ತಾ ಕುಳಿತಿದ್ದರು. ನನಗೆ ಇಲ್ಲಿ ಬಹಳ ಹೊತ್ತು ಏಕಾಗ್ರತೆಯಿಂದ ನಿಲ್ಲಲಾಗಲಿಲ್ಲ. ಜನರ ಗಲಾಟೆಯಿಂದಲೋ ಏನೋ. ಜ್ಯೋತಿರ್ ಲಿಂಗಗಳ ಬಗ್ಗೆ ಸ್ವಲ್ಪ ಇದಕ್ಕಿಂತಲೂ ಹೆಚ್ಚಾಗಿ ಮುಂದಿನ ಕಂತಿನಲ್ಲಿ ಬರೆಯುತ್ತೇನೆ.


ಘೃಷ್ಣೇಶ್ವರ-ದೇವಾಲಯದ ದೃಶ್ಯ

ಶಿರಡಿಗೆ ಮರಳಿದಾಗ ರಾತ್ರಿ ಒಂಭತ್ತಾಗಿತ್ತು. ಎಲ್ಲರೂ ಸಮೀಪದ ಆಂಧ್ರದ ಸಸ್ಯಾಹಾರಿ ಹೋಟೆಲಿನಲ್ಲಿ ಊಟ ಮಾಡಿ ನಮ್ಮ ಕೋಣೆಗಳಿಗೆ ತೆರಳಿದೆವು.

ಮುಂದಿನ ಭಾಗದಲ್ಲಿ - ಸಾಈ ಬಾಬಾ ಮತ್ತು ಆತನ ಶಿರಡಿಯ ಬಗ್ಗೆ ನನಗೆ ಕಂಡ ಹಾಗೆ ಬರೆಯುತ್ತೇನೆ.

|| ಇತಿ ಶಮ್ ||

Wednesday, October 10, 2007

ಸಾಈ-ಶಿವಾಜಿಯರ ನಾಡಿನಲ್ಲಿ - ಭಾಗ ೧

ನನ್ನ ಹಿಂದಿನ ಬರೆಹದಲ್ಲಿ ಬರೆದ ಹಾಗೆ ನಾನು ಕಳೆದ ಕೆಲವು ದಿನಗಳಲ್ಲಿ ಒಂದು ವಾರದ ಕಾಲ ಮಹಾರಾಷ್ಟ್ರದಲ್ಲಿ ಪ್ರವಾಸ ಮಾಡಿದೆ. ಅದರ ಬಗ್ಗೆ ಒಂದೆರಡು ಕಂತುಗಳಲ್ಲಿ ಬರೆಯುವ ಆಸೆಯಾಯ್ತು.ಕನ್ನಡದಲ್ಲಿ ಬರೆಯುವುದೋ ಆಂಗ್ಲದಲ್ಲೋ ಎಂಬ ದ್ವಂದ್ವ ಎದ್ದಿತ್ತು. ಆದರೆ ಕೆಲವು ಮಾತುಗಳು ಕನ್ನಡ ನಾಡು ಮತ್ತು ಮಹಾರಾಷ್ಟ್ರಗಳ ಹೋಲಿಸುವುದರ ಬಗ್ಗೆ ಇರುವುದರಿಂದ ಕನ್ನಡದ ಬರೆಹವೇ ಒಳಿತೆಂದು ಬಗೆದೆ.

ಅಮೇರಿಕೆಯಿಂದ ವಾಪಸಾದ ಬಳಿಕ ನಾನೆಂದೂ ಒಂದು ವಾರದ ಮಟ್ಟಿಗೆ ವಿರಾಮ ತೆಗೆದುಕೊಂಡಿರಲಿಲ್ಲ. ಬಹಳಷ್ಟು ವಿರಾಮದಿನಗಳು ಸೇರಿದ್ದುವು, ಇನ್ನೂ ಇವೆ. ಆದರೆ ಇವನ್ನು ಖರ್ಚು ಮಾಡಲು ಅವಕಾಶಗಳಿಲ್ಲದ ಕಾರಣ ಹೊರಗೆಲ್ಲೂ ಹೋಗಲು ಸಾಧ್ಯವಾಗಿರಲಿಲ್ಲ. ವಾರದ ಕೆಲಸದಲ್ಲಿ ಸೋಮ-ಶುಕ್ರರ ನಡುವೆ ಸುತ್ತುವ ಒಂದೇ ಏಕತಾನತೆ. ಹಬ್ಬ ಬಂದರೂ ಒಂದು ದಿನ ಮಾತ್ರ. ಅದೂ ಮನೆಯಲ್ಲೇ! ಮನಸ್ಸಿಗೆ ತುಕ್ಕು ಹಿಡಿದ ಹಾಗಿತ್ತು. ಮನಸ್ಸು-ದೇಹಗಳಲ್ಲಿ ಲವಲವಿಕೆಯೇ ಕಾಣದಿದ್ದರೆ ಕೆಲಸವನ್ನು ಕುಶಲವಾಗಿ ಹೇಗೆ ಮಾಡಲು ಸಾಧ್ಯ? ಇದೇ ಮೊದಲಾದ ನನ್ನ ಅಂತರಂಗದ ಮಾತು ದೇವರಿಗೂ ಕೇಳಿಸಿರಬೇಕು. ಅದಕ್ಕೆ ಅವನೇ ಈ ವ್ಯವಸ್ಥೆ ಮಾಡಿಸಿದ್ದು ಎಂದು ನನ್ನ ನಂಬಿಕೆ.

ನಮ್ಮ ಹೆಂಡತಿಯ ತವರಿನವರು ಶಿರಡಿಯ ಸಂತಶ್ರೇಷ್ಠರಾದ ಸಾಈ ಬಾಬಾರವರ ಭಕ್ತರು. (ಕನ್ನಡದಲ್ಲಿ ಇವರ ಹೆಸರನ್ನು ಪಾಪ - ಸಾಯಿಬಾಬಾ ಎಂದು ಮಾಡಿ ದಿನವೂ ಇವರ ಭಕ್ತರು ಇವರನ್ನು ಸಾಯಿಸುತ್ತಾರಲ್ಲ! ಸಾಈ ಸರಿಯಾದ ಪ್ರಯೋಗ. ಮರಾಠಿಯಲ್ಲಿ ಹೇಗೆ ಬರೆಯುತ್ತಾರೋ ನೋಡಿ.).ಇವರು ವರ್ಷಕ್ಕೆ ಒಂದು ಬಾರಿಯಾದರೂ ಶಿರಡಿಯ ದರ್ಶನ ಮಾಡುತ್ತಾರೆ. ಅವರ ಮಗಳಾದ ನನ್ನ ಹೆಂಡತಿಗೂ, ಅಳಿಯನಾದ ನನಗೂ ಕೃಪೆಮಾಡಿ ರೈಲು ಚೀಟಿ ಮೊದಲೇ ಕಾದಿರಿಸಿದ್ದರು. ಹೂವಿನ ಜೊತೆಗೆ ನಾರು ಕೂಡ ದೇವರ ಮೇಲೇರುವ ಹಾಗೆ, ಇವರೊಡನೆ ನಾನೂ ಪಯಣಿಸಿದೆ. ಜೊತೆಗೆ ಸ್ವಲ್ಪ ದೀರ್ಘವಾದ ಪ್ರವಾಸಗಳನ್ನು ಮಾಡದೆ, ಒಂದೇ ಕಡೆ ನೆಲೆಸಿದ್ದರಿಂದ ಮನಸ್ಸು ನಿರಂತರ ಹಿಂದೇಟು ಹಾಕುತ್ತಿತ್ತು. ಹೊರಡುವ ದಿನವೂ ನನಗೆ ಜ್ವರ ಬಂದಿತ್ತು! ಅಂತೂ ಇಂತೂ, ದೇವರ ಅದೃಷ್ಟವೋ, ನನ್ನ ಅದೃಷ್ಟವೋ ತಿಳಿಯದು - ರೈಲನ್ನಂತೂ ಏರಿದೆವು. ರೈಲೂ ಹೊರಟಿತು.

ರೈಲಿನ ಪ್ರಯಾಣ ನನಗೆ ಬಹಳ ಇಷ್ಟ. ಆದರೆ ರೈಲಿನಲ್ಲಿ ಕುಳಿತಿರುವುದೇ ಬೆರಳೆಣಿಕೆಯಷ್ಟು. ರಾತ್ರಿಯ ಹೊತ್ತು ರೈಲುಪ್ರಯಾಣವನ್ನು ಮಾಡಿರಲೇ ಇಲ್ಲ. ಬೆಂಗಳೂರಿನ ಟ್ರಾಫಿಕ್ ಭೂತದಿಂದ ಬೆಂದ ನನ್ನಂಥವರಿಗೆ ಬೆಂಗಳೂರಿನ ಕೇಂದ್ರದ ರೈಲ್ದಾಣದಿಂದ ಕಂಟೋನ್ಮೆಂಟಿಗೆ ಅಷ್ಟು ಬೇಗ ಹೋಗಲು ಸಾಧ್ಯವೇ ಎಂಬ ಆಶ್ಚರ್ಯ! ಅದೇ ನೋಡಿ ರೈಲಿನ ದೊಡ್ಡ ಗುಣ. ದಾರಿಯಲ್ಲೆಲ್ಲೂ ಜ್ಯಾಮ್ ಇರುವುದಿಲ್ಲ. ಆದರೆ ಕ್ರಾಸಿಂಗ್ ಇದ್ದಾಗ ಸಾಕಷ್ಟೇ ಹೊತ್ತು ಕಾಯಬೇಕಾಗಿಬರಬಹುದೆಂಬ ವಿಷಯ ನನಗೆ ತಿಳಿದಿರಲಿಲ್ಲ.

ಈ ಪ್ರವಾಸ ಹೇಳಿ-ಕೇಳಿ ತೀರ್ಥಯಾತ್ರೆಯಾದ್ದರಿಂದ ಅಷ್ಟು romantic ಆದ ಸನ್ನಿವೇಶಗಳೇನೂ ಇರಲಿಲ್ಲ. ನಮ್ಮ ತಂಡದಲ್ಲಿದ್ದವರು ನಮ್ಮ ಮಾವನವರು, ಅತ್ತೆ, ಅವರ ಮಗ ಮತ್ತು ಅಜ್ಜಿ. ನಾನು, ನನ್ನ ಹೆಂಡತಿ ಮತ್ತು ಮಗು, ನನ್ನ ಪತ್ನಿಯ ತಂಗಿ, ಆಕೆಯ ಪತಿ, ಮಾವನವರು ಮತ್ತು ಆಕೆಯ ಕೂಸು. ಒಟ್ಟಿನಲ್ಲಿ ಒಂಭತ್ತು ವಯಸ್ಕರು, ಇಬ್ಬರು ಹಸುಳೆಗಳ ತಂಡ. ಇಷ್ಟು ಜನರಿಗೆ ಸಾಮಾನೆಷ್ಟಿರಬಹುದೆಂದು ಊಹಿಸಿ. ಈ ಕೆಳಗಿನ ಚಿತ್ರದಿಂದ ನೀವೇ ಊಹಿಸಿಕೊಳ್ಳಬಹುದು! ಇದನ್ನು ಹೊತ್ತ ನಮಗೇ ಇದರ ಭಾರ ತಿಳಿಯಲು ಸಾಧ್ಯ!



ರೈಲಿನಲ್ಲಿ ಪಯಣಿಸದ ನಾನು ರೈಲಿನ ಬಗ್ಗೆ ಇನ್ನೂ ಸ್ವಲ್ಪ ಹೇಳುತ್ತೇನೆ. ಸಾವಧಾನವಾಗಿ ಆಲಿಸಬೇಕು. ನಮ್ಮ ಜಾಗವಿದ್ದದ್ದು ಬೋಗಿಯ ಶೌಚಾಲಯದ ಬಳಿ. ಎಷ್ಟು ಸೊಗಸೋ ಊಹಿಸಿ. ಆದರೆ ಅದೃಷ್ಟವಶಾತ್ ರೈಲು ಓಡುವ ಸಮಯದಲ್ಲಿ ಆ ಕಡೆಯಿಂದ ಯಾವ ನಾತವೂ ಬರದಿದ್ದುದು ನಮ್ಮ ಪುಣ್ಯ. ರೈಲು ಹೊರಟಾಗ ರೈಲಿನ ಕೂಗಿನ ಜೊತೆ ನನ್ನ ಎರಡೂವರೆ ವರ್ಷದ ಮಗನೂ ಕೂಗಬೇಕೇ? ರೈಲಿನಲ್ಲಿ ಮೊದಲ ಬಾರಿ ಪಯಣಿಸುತ್ತಿದ್ದ ಅವನಿಗೆ (ಇದರಲ್ಲಿ ನನಗೂ ಅವನಿಗೂ ಹೆಚ್ಚಿನ ಭೇದವಿಲ್ಲ, ಬಿಡಿ) ಏನೋ ಗಾಬರಿಯಾಗಿ ಜೋರಾಗಿ ಅಳಲಾರಂಭಿಸಿದ. ಇವನಿಂದ ನಮಗೂ ಗಾಬರಿ. ಅಲ್ಲಿ ಇಲ್ಲಿ ತೋರಿಸಿ ಮೈಮರೆಸಿ ಅರ್ಧಘಂಟೆಯ ನಂತರ ತನ್ನ ರೋದನವನ್ನು ನಿಲ್ಲಿಸಿದ. ಇದಾದ ಮೇಲೆ ಇವನೇ ಪರಮರೈಲುಪ್ರಿಯನಾದ ಎನ್ನುವುದು ಬೇರೆಯ ಮಾತು! ಈಗೆಲ್ಲಾದರೂ ಹೊರಗೆ ಹೋದರೆ ರೈಲಿನಲ್ಲಿ ಹೋಗೋಣ ಎಂಬ ಹಠ ಅವನದು!

ಸ್ಲೀಪರ್ ನಲ್ಲಿ ಮಲಗಿ ಹೇಗೆ ನಿದ್ದೆ ಮಾಡುತ್ತಾರೋ ಎಂದು ಕೇವಲ ಊಹೆ ಮಾಡಿದ್ದ ನನಗೆ ನಿದ್ದೆ ಹಿಡಿಯಲು ಹೆಚ್ಚುಕಾಲವಾಗಲಿಲ್ಲ. ಎದ್ದಾಗ ಸುಮಾರು ಏಳು ಘಂಟೆಯಾಗಿತ್ತು. ಆಫೀಸಿಗೆ ಹೋಗುವ ತರಾತುರಿಯಿಲ್ಲವೆಂಬ ನೆಮ್ಮದಿಯಿಂದ ಇನ್ನೂ ಸ್ವಲ್ಪ ಹೊತ್ತು ನಿರಾಳವಾಗಿ ಮಲಗಲು ಸಾಧ್ಯವಾಯ್ತು. ಹಡಗಿನಲ್ಲಿ ಎಂದೂ ಪಯಣಿಸದೇ ಒಮ್ಮೆ ಪಯಣಿಸುವವನನ್ನು ಪ್ರೀತಿಯಿಂದ Land-lubber ಅನ್ನುವ ಹಾಗೆ ನಾನೂ ಒಬ್ಬ home-lubber. ಮನೆಯ ಪ್ರಾಣಿಯಾಗಿರುವ ನನಗೆ ಸ್ನಾನ ಮಾಡದೆ ತಿಂಡಿ ತಿನ್ನಲು ಬಹಳ ಮುಜುಗರ. ದಂತಧಾವನದ ನಂತರ ಕಷ್ಟಪಟ್ಟು ಎರಡು ಮೂರು ಬ್ರೆಡ್ಡಿನ ತುಂಡುಗಳನ್ನು ತಿಂದದ್ದಾಯ್ತು. ನಮ್ಮ ಗುಂಪಿನ ಎಲ್ಲರೂ ಹಾಗೇ ಮಾಡಿದರು, ಮಡಿವಂತರಾದ ಅಜ್ಜಿಯವರನ್ನು ಬಿಟ್ಟು. ರೈಲಿನಲ್ಲಿ ಅದೆಷ್ಟು ಸಲ ಕಾಫಿಯನ್ನೋ ಟೀಯನ್ನೋ ತಿಂಡಿಯನ್ನೋ ಹೊರುತ್ತಾರೆ! ಅವರ ಅಡುಗೆ ಮನೆ ನೋಡಿದ ನಂತರ ನನಗೆ ಅದನ್ನು ತಿನ್ನುವ ಆಸೆ ಸಾಕಷ್ಟು ಕಡಿಮೆಯಾಯ್ತು. ಟೀ-ಕಾಫಿಗಳಿಗೆ ಆ ದೋಷವಿರದ ಕಾರಣ ಹಾಗೆಯೇ ಸ್ವೀಕರಿಸಲ್ಪಟ್ಟವು.

ರಾಯಚೂರಿನ ಕಡೆಗೆ ಹೋದದ್ದು ನಾನು ಹತ್ತು ವರ್ಷಗಳ ಹಿಂದೆ ಮಂತ್ರಾಲಯಕ್ಕೆ ಹೋದಾಗ. ಆ ಜಾಗದಲ್ಲಿ ಋತು ಎಂಬ ವಿಚಾರ ಇರಲಿಲ್ಲವೆಂಬ ಭಾವನೆ ನನ್ನದು, ಏಕೆಂದರೆ ನಿರಂತರದ ಗ್ರೀಷ್ಮ ಅಲ್ಲಿ. ಜಾಲಿ ಮರಗಳದ್ದೇ ಹಸಿರು. ನೆಲವೆಲ್ಲ ಬರಡಾಗಿ ಕಾಣುವಂಥ ಸಸ್ಯಸಂಪತ್ತಲ್ಲಿ. ಹೀಗೆ ನನ್ನ ಮನಸ್ಸಿನಲ್ಲಿ ದಾರಿಯಲ್ಲಿನ ಸಸ್ಯಶ್ಯಾಮಲತೆಯ ಬಗ್ಗೆಯಿದ್ದ ವಿಚಾರ. ಆದರೆ ಬೆಳಗ್ಗೆ ನನ್ನ ಕಲ್ಪನೆಯನ್ನೇ ತಿರುಗುಮುರುಗು ಮಾಡುವ ದೃಶ್ಯ ಕಾಣಿಸಿತು. ಎಷ್ಟು ಸೊಂಪಾದ ಹಸಿರು! ಅಂಥ ಉಷ್ಣತೆ ಹೆಚ್ಚಿರುವ ಜಾಗಗಳಲ್ಲಿ ಎಂಥ ಹಸಿರು. ಈ ವರ್ಷ ಈಯೆಡೆಗಳಲ್ಲಿ ಸೊಗಸಾಗಿ ಪರ್ಜನ್ಯನ ಕೃಪೆಯಾಗಿದೆ. ಮಹಾರಾಷ್ಟ್ರದಲ್ಲಿ ನಮ್ಮ ರೈಲು ಚಕ್ರವಿಟ್ಟಾಗ ಕಪ್ಪುನೆಲ ಅಲ್ಲಲ್ಲಿ ಮಾತ್ರ ಕಂಡಿತ್ತು; ಎಲ್ಲೆಲ್ಲೂ ಹಸಿರೇ! ಬಂಕಿಮ ಚಂದ್ರರ - "ಸುಜಲಾಂ ಸುಫಲಾಂ.... ಸಸ್ಯಶ್ಯಾಮಲಾಂ ಮಾತರಂ.. ವಂದೇ ಮಾತರಮ್" ಹಾಡಿನ ಸಾಲುಗಳನ್ನು ಅಲ್ಲಲ್ಲಿ ಕಂಡ ನದಿಗಳು, ಮಾವಿನ ಹಣ್ಣಿನ ಕಾಲವಲ್ಲದಿದ್ದರೂ ಹಸಿರಾಗಿ ಕಂಗೊಳಿಸುತ್ತಿದ್ದ ಮಾವಿನ ತೋಪುಗಳು, ಎಲ್ಲೆಲ್ಲೂ ಕಾಣುವ ಹಸಿರು ಗೋಷ್ಠಿಗಾನ ಮಾಡುವ ಹಾಗೆ ಕಂಡವು.

ಅಂತೂ ಶಿರಡಿಯ ಬಳಿಯಲ್ಲಿರುವ ಕೋಪರಗಾಂವ್ ತಲುಪಿದೆವು. ಅಲ್ಲಿಂದ ಶಿರಡಿ ಇಪ್ಪತ್ತು ನಿಮಿಷಗಳ ದೂರದಲ್ಲಿದೆ. ದೊಡ್ಡ ರಿಕ್ಷಾಗಳಲ್ಲಿ ನಮ್ಮ ಸಾಮಾನನ್ನು ಹಾಕಿ "ಭಕ್ತ ನಿವಾಸ" ಎನ್ನುವ ಸ್ಥಲ ತಲುಪುವ ವೇಳೆಗೆ ನಮಗೆಲ್ಲ ಸುಸ್ತಾಗಿತ್ತು. ದಾರಿಯಲ್ಲಿನ ಅಂಗಡಿಗಳನ್ನು ನೋಡುತ್ತಿದ್ದಾಗ ಮಹಾರಾಷ್ಟ್ರದ ಮಧ್ಯೆ ಇದೇನಪ್ಪ ಆಂಧ್ರ ಅನ್ನುವ ಹಾಗೆ ಕಂಡಿತು. ಎಲ್ಲೆಲ್ಲೂ ತೆಲುಗು ಭಾಷಾ ಫಲಕಗಳೇ! ಅಂದು ರಾತ್ರಿ ಕಷ್ಟ ಪಟ್ಟು ಕೋಣೆ ಗಿಟ್ಟಿಸಿಕೊಂಡೆವು. ಆಗಷ್ಟೆ ಜ್ವರ ಬಿಟ್ಟಿದ್ದ ನನಗೆ ಆಂಧ್ರದ ಊಟ ಅಷ್ಟು ರುಚಿಸಲಿಲ್ಲ. ಹಾಗೂ ಹೀಗೂ ಸಾಈ ಬಾಬಾರವರ ಸಮಾಧಿಸ್ಥಾನದ ದೂರದರ್ಶನ ಮಾಡಿ ಬಂದೆವು. ಕೋಣೆ ಸೇರಿ ದಿಂಬಿಗೆ ತಲೆ ಇಟ್ಟದ್ದೇ ತಡ, ನಿದ್ರಾದೇವಿ ಮೈಮನಗಳನ್ನು ಆವರಿಸಿಬಿಟ್ಟಳು.

ಮಳೆಯನ್ನು ಸ್ವಲ್ಪ ಭಯದಿಂದ ನಿರೀಕ್ಷಿಸಿದ್ದ ನಮಗೆ ಭಯನಿವಾರಣೆಯಾಯ್ತು. ನಾವಿದ್ದ ಒಂದು ದಿನವೂ ಅಲ್ಲಿ ಮಳೆಯಾಗಲಿಲ್ಲ. ಇದರಿಂದ ಯಾತ್ರೆ ಸುಗಮವಾಗಿ ಸಾಗಿತು.

ಮರುದಿನ ಬೆಳಗ್ಗೆ ನಾವು ಶನೈಶ್ಚರನ ಸ್ಥಾನವಾದ ಶಿಂಗನಾಪುರಕ್ಕೆ ತೆರಳಿದೆವು. ದಾರಿಯಲ್ಲಿ ಅಲ್ಲಲ್ಲಿ "ರಸವಂತಿ" ಕೇಂದ್ರಗಳು ಕಂಡವು. ಇವು ಕಬ್ಬಿನ ಹಾಲಿನ ಕೇಂದ್ರಗಳು. ಗಾಣದ ಹಾಗಿರುವ ವ್ಯವಸ್ಥೆಯಲ್ಲಿ ಎತ್ತುಗಳಿಂದ ಕಬ್ಬನ್ನು ಹಿಂಡಿ ರಸತೆಗೆಯುತ್ತಾರೆ. ನಮ್ಮೂರಿನ ಕಡೆ ಸಿಗುವ ಹಳ್ಳೀಕಾರನ್ನೋ ಸೀಮೆಯ ಹಸುವನ್ನೋ ಕಂಡ ನನಗೆ ಈ ದೇಶೀಯ ತಳಿ ಅಕ್ಕರೆಯುಕ್ಕಿಸಿತು. ಸ್ವಲ್ಪ ಗುಜ್ಜಾಗಿ ಕಂಡ ಆ ಗಾಣದ ಎತ್ತು ತನ್ನ ಪಾಡಿನ ಕೆಲಸವನ್ನು ಚೆನ್ನಾಗಿ ಮಾಡಿ ಮರದ ನೆಳಲಿನಲ್ಲಿ ಆರಾಮವಾಗಿ ನಿಂತಿತ್ತು. ಬೆಂಗಳೂರಿನಲ್ಲಿ ನಾ ಕುಡಿದ ಕಬ್ಬಿನ ರಸಕ್ಕೆ ಶುಂಠಿ ಸೇರಿಸಿದ್ದ ಜ್ಞಾಪಕವಿರಲಿಲ್ಲ. ಅಲ್ಲಿ ನಿಂಬೆ, ಸ್ವಲ್ಪವೇ ಮಸಾಲೆ ಮತ್ತು ಶುಂಠಿಯನ್ನೂ ಸೇರಿಸಿ ಸೊಗಸಾಗಿ ಮಾಡುತ್ತಾರೆ. (ಅಂದ ಹಾಗೆ ರಾಮನಗರದ ಬಳಿ ಇರುವ ಕಾಮತ್ ಲೋಕರುಚಿಯ ಕಬ್ಬಿನ ಹಾಲಿಗೂ ಶುಂಠಿ-ನಿಂಬೆಗಳನ್ನು ಸೇರಿಸಿರುತ್ತಾರೆ. ಅದೂ ಸೊಗಸಾಗಿರುತ್ತದೆ). ನಾವೆಲ್ಲ ಕಬ್ಬಿನ ರಸವನ್ನು ಸವಿದೆವು. ಬೆಲೆಯೂ ಹೆಚ್ಚಿರಲಿಲ್ಲ. ಐದು ರೂಪಾಯಿಗೆ ಒಂದು ಲೋಟ.

ಸದ್ಯಕ್ಕಿಲ್ಲೇ ವಿರಮಿಸುತ್ತೇನೆ. ಮುಂದಣ ಭಾಗದಲ್ಲಿ ಶಿಂಗನಾಪುರದ ಜೊತೆ ಎಲ್ಲೋರ ಮತ್ತು ಶಿರಡಿಯ ಬಗ್ಗೆ ನೋಡೋಣ.

|| ಇತಿ ಶಮ್ ||