Friday, May 12, 2006

ದೇಶೀಯ ಜೀವನ ಪದ್ಧತಿ

In search of a sustainable lifestyle - Deccan Herald - Internet Edition

ಮೇಲಿನ ಕೊಂಡಿ ಕ್ಲಿಕ್ಕಿಸಿದರೆ "ದೇಶಿ ಜೀವನ ಪದ್ಧತಿ" ಎಂಬ ಪುಸ್ತಕದ ಒಂದು ವಿಮರ್ಶೆ ಸಿಗುವುದು. ಪುಸ್ತಕ ಬರೆದವರು ಪ್ರಸನ್ನ ಎಂಬುವವರು.

ಲೇಖನ ಓದಿದಾಗ ನನಗನ್ನಿಸಿದ ಕೆಲವು ವಿಷಯಗಳನ್ನು ಇಲ್ಲಿ ಸಂಗ್ರಹಿಸುತ್ತಿದ್ದೇನೆ.

ಮೊದಲನೆಯದೆಂದರೆ ಇಂಧನ ಉಳಿತಾಯ. ಪ್ರತಿದಿನ ಕಾರಿನಲ್ಲಿ ಸಾಕಷ್ಟು ಓಡಾಡುವ ನಾನು ದಿನಕ್ಕೆ ಸ್ವಲ್ಪ ಹೆಚ್ಚು ಇಂಧನವನ್ನೇ ವ್ಯಯಿಸುತ್ತೇನೆ ಎಂದು ಹೇಳಬೇಕು. ಇದನ್ನು ಮಾಡುವಾಗ ನನಗೆ ನಿತ್ಯದ ಅಳುಕು. ಪರಿಸರದ ಬಗ್ಗೆ ಸ್ವಲ್ಪ ಕಾಳಜಿ ಇರುವವ ನಾನು ಎಂದು ನನ್ನ ಅನಿಸಿಕೆ. ಆದರೆ ನಾನೇ ಈ ರೀತಿ ಮಾಡಿದಾಗ ಕಾಳಜಿಯಿಲ್ಲದವರು ಇನ್ನೇನು ಮಾಡಿಯಾರು? ಮನೆಯೊಂದು ದಿಕ್ಕಿನಲ್ಲಿ ಕಛೇರಿ ಇನ್ನೊಂದು ದಿಕ್ಕಿನಲ್ಲಿರುವುದು ಸಾಮಾನ್ಯ. ಅದೂ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ನನಗೆ ಮನೆ ಇರುವ ಜಾಗ ಬದಲಾಯಿಸಲು ಇಷ್ಟವಿಲ್ಲ. ಸದ್ಯಕ್ಕಿರುವ ಕೆಲಸವನ್ನು ಬಿಟ್ಟು ಬೇರೆಡೆ ಸೇರುವ ಮನಸ್ಸೂ ಇಲ್ಲ. ಸಾರ್ವಜನಿಕ ಬಸ್ಸಿನಲ್ಲಿ ಓಡಾಡಲು ಸಾಕಷ್ಟು ಸಮಯವೇ ಬೇಕಾಗುವುದು. ಹೀಗೆ ಕಾರೇ ನನಗೆ ಗತಿ. ಮನೆಮಂದಿಯೆಲ್ಲರೂ ಒಟ್ಟಿಗೆ ಓಡಾಡಬೇಕು ಎನ್ನುವ ಕಾರಣದಿಂದ ಸ್ವಲ್ಪ ದೊಡ್ಡ ಯಾನವನ್ನೇ ಕೊಂಡದಾಯ್ತು. ಹೀಗೆ ಸಂನ್ಯಾಸಿಯ ಸಂಸಾರದ ಹಾಗೆ ಗೃಹಸ್ಥನಾದ ನನ್ನ ಕಾರಿನ ಪುರಾಣ. ಇಂಧನವ್ಯಯವನ್ನು ಕಡಿಮೆ ಮಾಡಲು ಸಾಧ್ಯವಾಗುವುದು ಮನೆಯಿಂದಲೇ ಕೆಲಸ ಮಾಡುವುದರಿಂದ. ವಾರಕ್ಕೆ ಒಂದು ದಿನ ಮನೆಯಿಂದ ಕೆಲಸ ಮಾಡಲು ಯತ್ನಿಸುತ್ತೇನೆ. ಆದರೂ ಇಂಥ ಪುಸ್ತಕಗಳ ಮತ್ತು ಅಭಿಯಾನಗಳ ಬಗ್ಗೆ ಓದಿದಾಗ ಮನಸ್ಸಿನಲ್ಲಿ ಏನೋ ಅಳುಕು. ನನ್ನ ಜೀವನ ಶೈಲಿಯನ್ನು ಹೇಗೆ ಬದಲಾಯಿಸಬಹುದು ಅನ್ನುವುದರ ಬಗ್ಗೆ ಸ್ವಲ್ಪ ಗಂಭೀರವಾದ ಆಲೋಚನೆ ನಡೆಸಬೇಕಾಗಿದೆ.

ಇನ್ನೊಂದು ವಿಷಯ - ಬಟ್ಟೆ ಒಗೆಯುವ ಪುಡಿಯ ಬಗ್ಗೆಯದು. ಈಗ ಪ್ರಸನ್ನ ಒಂದು ಕುತೂಹಲದ ಸಂಗತಿಯನ್ನು ನಮ್ಮ ಮುಂದಿಡುತ್ತಾರೆ. ವಾಸ್ತವವಾಗಿ ನಮಗೆ ಬಟ್ಟೆ ಶುದ್ಧವಾಗಿರಬೇಕು ಮತ್ತು ಮೆತ್ತಗಿರಬೇಕೆಂಬುದೇ ಆವಶ್ಯಕವಂತೆ. ಹೊಳೆಯುವ ಬಿಳುಪು ಇತ್ಯಾದಿಯೆಲ್ಲವೂ ಬೇಕಾಗಿದೆ ಎಂದರೆ ಅದು ಜಾಹಿರಾತು ಮಾಡುವವರ ಮೋಡಿಯಂತೆ! ಇದು ಸ್ವಲ್ಪ ಅಶ್ಚರ್ಯದ ವಿಷಯವಲ್ಲವೇ? ಈಗ ನಿಮಗೆ ನಿಮ್ಮ ಬಟ್ಟೆ ಹೊಸದರಂತಿರಬೇಕು ಎಂಬ ಆಸೆಯೇ ಇರುವುದಿಲ್ಲವೇ? ನನಗಂತೂ ಇದೆ. ಆದರೆ ಬಟ್ಟೆ ಹೊಸದಾಗಿರುವಂತಿಡಲು ಸ್ವಲ್ಪ ತೀಕ್ಷ್ಣವಾದ ರಾಸಾಯನಿಕಗಳೇ ಬೇಕು ಅನ್ನುವ ಹಾಗೆ ಪ್ರಸನ್ನ ಬರೆದಿದ್ದಾರೆ. ರಸಾಯನ ಶಾಸ್ತ್ರವನ್ನು ಹೆಚ್ಚಾಗಿ ಓದದ ನನಗೆ ಈ ವಿಷಯದ ಸತ್ಯಾಂಶ ಎಷ್ಟು ಅನ್ನುವುದು ಗೊತ್ತಿಲ್ಲ. ಯಾರಿಗಾದರೂ ಗೊತ್ತಿದ್ದರೆ ದಯವಿಟ್ಟು ತಿಳಿಸಿ. ಬೇರೆಯವರು ನಿಮ್ಮನ್ನು "ಸ್ವಚ್ಛ ಆದರೆ ಸ್ವಲ್ಪ ಮಾಸಲು ಬಣ್ಣದ ಅಂಗಿಯನ್ನು ಧರಿಸಿರುವವನು(ಳು)" ಎಂದು ಗುರುತಿಸಿದರೆ ತೊಂದರೆ ಇಲ್ಲವೇ? ನೀವೂ ನನ್ನ ಮಾತನ್ನು ಅನುಮೋದಿಸುತ್ತೀರಾ? ನಾವು ಆ ಮಟ್ಟಿಗೆ ಜಾಹಿರಾತುಗಳಿಂದ ಪ್ರಭಾವಿತರಾಗಿದ್ದೇವೆಯೇ?

ಪ್ಲಾಸ್ಟಿಕ್ಕಿನ ಅತಿ ಹೆಚ್ಚಿನ ಉಪಯೋಗದ ಬಗ್ಗೆ ನನ್ನ ವಿರೋಧವಿದೆ. ಇನ್ನು ಮುಂದೆ ಮನೆಯಲ್ಲಿ ಬಟ್ಟೆಯ ಚೀಲದ ಉಪಯೋಗ ಹೆಚ್ಚು ಮಾಡಲು ನಿರ್ಧರಿಸಿದ್ದೇನೆ. ಕ್ರಮೇಣ ಪ್ಲಾಸ್ಟಿಕ್ ಚೀಲಗಳ ಉಪಯೋಗ ನಿಲ್ಲಿಸಬೇಕು.

ಆಧುನಿಕ ಸೌಲಭ್ಯಗಳ ಸಾಮಾಜಿಕ ಆಯಾಮವನ್ನೂ ಪ್ರಸನ್ನ ನಮ್ಮ ಮುಂದಿಡುತ್ತಾರೆ. ಕಾಂಡೋಮುಗಳು ಹೆಚ್ಚು ಹೆಚ್ಚು ಲಭ್ಯವಿರುವುದರಿಂದ casual ಲೈಂಗಿಕ ಸಂಬಂಧಗಳಿಗೆ ದಾರಿ ಮಾಡಿ ಸಮಾಜದ ಶೈಥಿಲ್ಯಕ್ಕೆ ಕಾರಣವಾಗಿದೆಯಂತೆ. ಒಂದು ಕಡೆ ಜನಸಂಖ್ಯೆಯನ್ನು ಹತ್ತಿಕ್ಕುವಲ್ಲಿ ಸಹಾಯ ಮಾಡುವ ಈ ಸೌಲಭ್ಯ ಹೀಗೆ ಕೂಡ ಸಮಾಜದ ಅಧಃಪತನಕ್ಕೆ ಕಾರಣವಂತೆ. ನನಗೆ ಅಂಕಿ-ಅಂಶಗಳಿಲ್ಲದೆ ಇದನ್ನು ನಂಬಲು ಸಾಧ್ಯವಿಲ್ಲ. ಸಂಬಂಧಗಳನ್ನು ಅಂಕಿಗಳ ಮೂಲಕ ಅಳೆಯಲು ಸಾಧ್ಯವೇ? ಕಾಂಡೋಮುಗಳ ಬಳಕೆಯಿಂದ ಲೈಂಗಿಕ ರೋಗಗಳನ್ನು ತಡೆದ ಹಾಗಾಗಿಲ್ಲವೆ? ಹೀಗೆ ಇದರ ಬಗ್ಗೆ ಮನಸ್ಸು ದುವಿಧದಲ್ಲಿದೆ. ನಿಮಗೇನನ್ನಿಸುತ್ತದೆ?

ಒಂದು ದಿಕ್ಕಿನಿಂದ ಯೋಚಿಸಿದಾಗ - ಮಾನವ ಪ್ರಕೃತಿಯ ಕೂಸು. ಪ್ರಕೃತಿಗೂ ತನಗೂ ಕುಂದು ಬಾರದ ಹಾಗೆ ಜೀವನ ನಡೆಸುವುದು ಧರ್ಮ. ಪ್ರಕೃತಿಯನ್ನು ಮೀರಿ ಅದನ್ನು ಲೂಟಿ ಮಾಡಿದರೆ ನಮಗೇ ಹಾನಿ. ಪರಿಸರಕ್ಕೆ ಹಾನಿಯುಂಟು ಮಾಡುವ ಯಾವ ಕೆಲಸವನ್ನೂ ಮಾಡಬಾರದು.

ಆದರೆ ಇನ್ನೊಂದು ಕಡೆಯಿಂದ ಹೀಗೆ - ಪ್ರಕೃತಿಯಿರುವುದು ತನ್ನ ಪಾಡಿಗೇ ಆದರೂ ಮಾನವ ಅದನ್ನು ಉಪಯೋಗಿಸಬಹುದು, ಉಪಯೋಗಿಸಲೇ ಬೇಕು. ತನ್ನ ಆರಾಮಗಳನ್ನು ಹೆಚ್ಚು ಮಾಡಿಕೊಂಡರೆ ಬೌದ್ದಿಕವಾಗಿ ಮನುಷ್ಯ ಬೆಳೆಯುತ್ತಾನೆ; ಸಮಾಜವೂ ಬೆಳೆಯುತ್ತದೆ. ಪ್ರಗತಿ ಪ್ರಕೃತಿಯನ್ನು ಮೀರಿದ ಮೇಲೆ ತಾನೆ ಸಾಧ್ಯ? ಈಗ, ಆದಿ ಮಾನವ ಬೇಟೆಯಾಡುತ್ತಿದ್ದವನು ಕ್ರಮೇಣ ವ್ಯವಸಾಯವನ್ನು ಕಲಿತು ಒಂದೆಡೆ ಜೀವಿಸಲು ಪ್ರಾರಂಭಿಸಿದ್ದರಿಂದ ಅವನ ಬುದ್ದಿಯ ಬೆಳವಣಿಗೆ ಆಗಲಿಲ್ಲವೇ? ಈ ರೀತಿಯ ಬೆಳವಣಿಗೆಯಿಂದ ತಾನೆ ಈಗ ನಮ್ಮಂಥವರು ಗಣಕದಲ್ಲಿ ಕೀಲಿ ಮಾಡುತ್ತಿರುವುದು? ಈ ರೀತಿಯ ಆಲೋಚನಾಕ್ರಮದಿಂದ ತಾನೆ ಸಾಂಕ್ರಾಮಿಕ ರೋಗಗಳ ನಾಶವಾದದ್ದು? ಇದರಿಂದ ತಾನೆ ನದಿಗಳ ಮೇಲೆ ಅಣೆಕಟ್ಟುಗಳನ್ನು ಕಟ್ಟಿ ನೆರೆಯನ್ನು ಹತೋಟಿಯಲ್ಲಿಡಲು ಸಾಧ್ಯವಾಗಿದ್ದು?

ಪ್ರಕೃತಿಯನ್ನು ತೀರ ಅಲಕ್ಷ್ಯಮಾಡಲು ನನ್ನಿಂದ ಸಾಧ್ಯವಿಲ್ಲ. ಆದರೆ ಎಷ್ಟರ ಮಟ್ಟಿಗೆ ಆ ರೀತಿಯ ಜೀವನ ಸಾಧ್ಯ? ನಾವೆಲ್ಲರೂ ಕಾಡಿಗೆ ಹೋಗಿ ಮರದಿಂದ ಬಿದ್ದ ಹಣ್ಣುಗಳನ್ನು ಮಾತ್ರ ಸೇವಿಸಿ ಬದುಕಲು ಸಾಧ್ಯವೇ? ಈಗ ಭಾರತದಲ್ಲಿ ನರ್ಮದಾ ನದಿಯ ಮೇಲೆ ಅಣೆಕಟ್ಟು ಕಟ್ಟಬಾರದೆಂಬುದರ ಬಗ್ಗೆ ಚಳವಳಿ ನಡೆದಿದೆ. ಅಂಕಿ-ಅಂಶಗಳನ್ನು ಕಟ್ಟುವುದರ ಪರವಾಗಿರುವವರೂ ಮತ್ತು ವಿರೋಧಿಗಳೂ ಉಪಯೋಗಿಸುತ್ತಾರೆ. ಆದರೆ ಯಾರು ಸರಿ?

ಆದರೆ ಒಂದು ಮಾತು ಸತ್ಯ - yesterday's luxury becomes today's necessity. ಇದನ್ನು ನಾನು ಕಂಡುಕೊಂಡಿದ್ದೇನೆ. ಮೊಬೈಲುಗಳ ಉದಾಹರಣೆ ತೆಗೆದುಕೊಳ್ಳಿ. ಮೊಬೈಲುಗಳಿಲ್ಲದೆ ಆರಾಮವಾಗಿದ್ದವನು ನಾನು. ಆದರೆ ಅದನ್ನು ಕೊಂಡು ಉಪಯೋಗಿಸಿದ ನಂತರ ಮನೆಯನ್ನು ಬಿಟ್ಟೂ ಒಂದು ಘಳಿಗೆ ಹೋಗಬೇಕಾದರೂ ಸೆಲ್ ಫೋನ್ ನನ್ನ ಜೊತೆಯಲ್ಲಿರಬೇಕು. ಇಷ್ಟರ ಮಟ್ಟಿನ ಗುಲಾಮನಾಗಿದ್ದೇನೆ. ಈ ಗುಲಾಮಗಿರಿಯಲ್ಲಿ ನನ್ನದು ಮಾತ್ರವಲ್ಲದೆ ಸಮಾಜದ ಪಾತ್ರವೂ ಇದೆ. ಹಿಂದಾದರೆ ಯೋಜನೆ ಹಾಕಿ ನಂತರ ಕೆಲಸ ಮಾಡುತ್ತಿದ್ದರು. ಈಗ ಆಗ ಬೇಕಾಗಿರುವುದನ್ನು ಆಗಲೇ ಕಂಡುಕೊಳ್ಳುವುದು. ಛಕ್ಕನೆ ಸೆಲ್ ಫೋನಿಸುತ್ತಾರೆ. ಮಾಮೂಲಿ ಫೋನಿನಲ್ಲಿ ನಮಗೆ ಬೇಕಾದ ವ್ಯಕ್ತಿ ಸಿಗದಿರುವ ಸಾಧ್ಯತೆಯಿತ್ತು. ಆದರೆ ಈಗ "ಫೋನ್ ಯಾಕೋ ಆಫ್ ಮಾಡಿದ್ದೆ?" ಎಂದು ನಂತರ ಸಿಕ್ಕಿದ ಮೇಲೆ ಗದರುತ್ತೇವೆ. ಅಥವಾ "ಇನ್ನೂ ಸೆಲ್ ಫೋನ್ ಇಲ್ಲವಾ? ನಿನ್ನನ್ನು ನಾವು ಹೇಗೆ ಸಂಪರ್ಕಿಸುವುದು?" ಎಂದು ಪ್ರಶ್ನಿಸುತ್ತೇವೆ. ಈ ಲಕ್ಷುರಿಗಳು ಆವಶ್ಯಕತೆಗಳಾಗಿ ಮಾರ್ಪಡುವುದೇ ಪ್ರಗತಿಯ ಸಂಕೇತವೇ?

ಒಟ್ಟಿನಲ್ಲಿ ಎಲ್ಲಿ ನಿಲ್ಲಬೇಕು ಅನ್ನುವುದೇ ಪ್ರಶ್ನೆ. ವಾನಪ್ರಸ್ಥರ ಹಾಗೆ ಅಪರಿಗ್ರಹ ಹಿಡಿಯಬೇಕೆ? ಅಥವಾ ಪ್ರಕೃತಿಯ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಬಾರದೆ? ಮೊದಲು ಎಲ್ಲಿದ್ದೆನೋ ಅಲ್ಲಿಗೇ ಬಂದಿದ್ದೇನೆ.

ನನ್ನ ಸದ್ಯದ ವಿಚಾರ ಹೆಸರು ತಿಳಿಯದ ಒಬ್ಬ ಕವಿ ಹಾಡಿದ ಹಾಗಿದೆ:

ಅವರವರಿಗೆ ಅವರ ಹಾದಿ, ಅವರ ಹಾದಿ...

Monday, May 08, 2006

ತಮಿಳು ತಲೆಗಳ ನಡುವೆ

ಮೊನ್ನೆ ಬೆಂಗಳೂರಿನ ಸಪ್ನಾ ಪುಸ್ತಕ ಭಂಡಾರಕ್ಕೆ ಹೋಗಿದ್ದೆ. ನನಗೆ (ನಮ್ಮ ಮನೆಯ ಎಲ್ಲರಿಗೂ ಸಹ) ಯಾವುದೇ ಸಮಾರಂಭವಾಗಲಿ, ಆದಷ್ಟು ಪುಸ್ತಕಗಳನ್ನೇ ಕೊಡಬೇಕೆನ್ನುವ ಪರಿಪಾಟ (ಮತ್ತೊಮ್ಮೆ - "ಪರಿಪಾಠ" ತಪ್ಪು ಪ್ರಯೋಗ). ಸರಿ, ಜೊತೆಗೆ ಹೊಸ "book mall" ಉದ್ಘಾಟನೆಯ ಬಗ್ಗೆ ವಾರ್ತಾಪತಿಕೆಗಳಲ್ಲಿ ಸಮಾಚಾರ ಮೂಡಿತ್ತು. ಸರಿಯೇ ನೋಡಿಬಿಡೋಣವೆಂದು ಹೋದೆ. ಅಲ್ಲಿ ಎರಡನೆ ಅಂತಸ್ತಿನಲ್ಲಿ ಕನ್ನಡ ಪುಸ್ತಕಗಳ ವಿಭಾಗವನ್ನು ಇಟ್ಟಿದ್ದಾರೆ. ಈ ಅಂಗಡಿಯ ವೈಶಿಷ್ಟ್ಯವೆಂದರೆ ಕನ್ನಡ ಪುಸ್ತಕಗಳು. ಆಂಗ್ಲಪುಸ್ತಕಗಳ ಅಂಗಡಿಗಳು ಬೆಂಗಳೂರಿನಲ್ಲಿ ಬೇರೆಯವೂ ಇವೆ. ಆದರೆ ಬಹಳಕಡೆಗಳಿಂದ ಕನ್ನಡಪುಸ್ತಕಗಳನ್ನು ಒಂದೆಡೆ ಸೇರಿಸಿರುವುದು ಸಪ್ನಾ ದಲ್ಲಿ. ಇದರ ಜೊತೆ ಶೇಖಡಾ ಹತ್ತರ ರಿಯಾಯ್ತಿ. ಕೊಳ್ಳದಿರಲು ಹೇಗೆ ಸಾಧ್ಯ? ಅಂದ ಹಾಗೆ ಗಾಂಧಿಬಜಾರಿನ ಅಂಕಿತ ಪುಸ್ತಕಾಲಯವೂ ಒಳ್ಳೆಯ ಪುಸ್ತಕಗಳಿಂದ ಕೂಡಿದೆ.

ಅದಿರಲಿ. ಬೇರೆಯವರಿಗೆ ಪುಸ್ತಕ ಕೊಳ್ಳಲು ಹೋದ ನನಗೆ ಒಂದೆರಡು ಪುಸ್ತಕಗಳು ಬೇಡವೇ? ಸರಿ ಹುಡುಕುತ್ತಿದ್ದೆ. ಬಹಳ ದಿನಗಳಿಂದ ಓದಬೇಕೆಂದುಕೊಂಡಿದ್ದ ಪುಸ್ತಕಗಳು ಡಾ|| ಬಿ.ಜಿ.ಎಲ್ ಸ್ವಾಮಿಯವರವು. ಅವರ "ಹಸುರು ಹೊನ್ನು" ಮತ್ತು "ತಮಿಳು ತಲೆಗಳ ನಡುವೆ" ಕೊಂಡೆ. "ಪಂಚಕಲಶಗೋಪುರ"ವೆಂಬ ಅವರ ಪುಸ್ತಕವನ್ನು ಎರವಲು ಪಡೆದು ಒಂದೆರಡು ಭಾಗ ಓದಿದ್ದೆ. ಸ್ವಾಮಿಯವರ ಶೈಲಿ ತಿಳಿಹಾಸ್ಯದಿಂದ ಕೂಡಿದೆ. ತಿಳಿ ಮಾತ್ರ ಅಲ್ಲ - ಹಾಸ್ಯದಲ್ಲಿ ಸಿಹಿ, ಕಹಿ, ಖಾರ, ಹುಳಿ ಇವೆಲ್ಲ ರಸಗಳನ್ನು ಇವರು ಚೆನ್ನಾಗಿ ಸೇರಿಸಿದ್ದಾರೆ. ಆದ್ದರಿಂದ ಇವರ ಪುಸ್ತಕವನ್ನು ಓದಲು ಇಷ್ಟ. ಜೊತೆಗೆ ಡಿವಿಜಿಯವರ ಮಗ ಬೇರೆ. ತಂದೆ ಮಕ್ಕಳು ಒಂದೇ ಅಲ್ಲದಿದ್ದರೂ ಅವರ ಮಧ್ಯೆ ಇರುವ ವ್ಯತ್ಯಾಸವನ್ನಾದರೂ ನೋಡಬೇಕಲ್ಲಾ ಎಂಬ ಕುತೂಹಲ. ಇನ್ನೂ ಒಂದು ಆಶ್ಚರ್ಯಕರ ಸಂಗತಿಯೆಂದರೆ ಕೇಂದ್ರ ಸಾಹಿತ್ಯ ಪ್ರಶಸ್ತಿಯನ್ನು ಪಡೆದ ಮೊದಲನೆಯ ತಂದೆ-ಮಕ್ಕಳ ಜೋಡಿಯೆಂದರೆ ಡಿವಿಜಿ-ಬಿಜಿಎಲ್ ಅವರದು. ಹಸುರು-ಹೊನ್ನು ಎಂಬ ಇವರ ಪುಸ್ತಕಕ್ಕೆ ಸಂದ ಗೌರವ. ಅದನ್ನು ಮನಗೆ ಹೋದ ತಕ್ಷಣ ನನ್ನ ಪತ್ನಿ ನನ್ನಿಂದ ಕಿತ್ತುಕೊಂಡಳು. ಸರಿ ನನಗಿದ್ದದ್ದು "ತಮಿಳು ತಲೆಗಳ ನಡುವೆ" ಎಂಬುದು.

ಬಿ.ಜಿ.ಎಲ್ ಅವರು (ಇನ್ನು ಮುಂದೆ ಸ್ವಾಮಿಯವರು ಅಥವಾ ಬಿಜಿಎಲ್ ಅನ್ನುತ್ತೇನೆ) ಮದರಾಸಿನಲ್ಲಿ ಪ್ರೆಸಿಡೆನ್ಸಿ ಮಹಾವಿದ್ಯಾಲಯದಲ್ಲಿ ಬಾಟನಿಯ ಪ್ರಾಧ್ಯಾಪಕರಾಗಿ ಕೆಲವು ದಶಕಗಳ ಸೇವೆ ಸಲ್ಲಿಸಿದ್ದರು. ಅಲ್ಲಿ ನಡೆದ ಅವರ ತಮಿಳಿಗರೊಡನೆಯ ತಮಿಳಿನ ಬಗ್ಗೆಯಾದ ಅನುಭವದ ಸಂಗ್ರಹವೇ "ತಮಿಳು ತಲೆಗಳ ನಡುವೆ". ಸ್ವಾಮಿಯವರ ಮನೆ ಮಾತು ತಮಿಳು. ಆದರೂ ತಮ್ಮನ್ನು ತಾವು ಕನ್ನಡಿಗರೆಂದು ಕಂಡುಕೊಳ್ಳುತ್ತಿದ್ದರು. ಇದರೊಡನೆ ಅಪ್ಪಟ ವೈಜ್ಞಾನಿಕ ಮನೋಭಾವನೆ ಇವರದು. ಜೊತೆಗೆ ತಮಿಳಿನ ಬಗ್ಗೆ ಸಹಜವಾಗಿ ಮೂಡಿದ ಕುತೂಹಲ.

ಸರಿ ಪುಸ್ತಕಕ್ಕೆ ಬರೋಣ. ತಮಿಳು ಸಾಹಿತ್ಯವನ್ನು ಸ್ವಾಮಿಯವರು ಚೆನ್ನಾಗಿ ಅಭ್ಯಾಸ ಮಾಡಿದ್ದರೆಂದು ತೋರುತ್ತದೆ. ಮೊದಲಿಗೆ ತಮಿಳಿನ "ಚಂಗ" (ಸಂಘ) ಕಾವ್ಯಗಳ ಕಾಲದ ಹಾಸ್ಯಲೇಪಿತ ಪರಿಚಯವಾಗುತ್ತದೆ.
"ತಮಿಳು ಸಂಸ್ಕೃತಕ್ಕಿಂತಲೂ ಹಳೆಯದು. ಬೇರೆ ದ್ರಾವಿಡ ಭಾಷೆಗಳಾದ ಕನ್ನಡ, ಮಲೆಯಾಳ, ತೆಲುಗುಗಳ ತಾಯಿಸ್ಥಾನದಲ್ಲಿ ನಿಲ್ಲಲು ತಕ್ಕದ್ದು. ಈ ಭಾಷೆಯ ಸಾಹಿತ್ಯ ಕ್ರಿ.ಪೂ. ೨ ನೆಯ ಶತಮಾನಕ್ಕಿಂತ ಹಳೆಯದು. ವಾಸ್ತವವಾಗಿ ಇನ್ನೂ ಹಳೆಯದು - ಆದರೆ ಬೇರೆ ಭಾಷೆಯವರು ನಾಚಿಕೆಯಿಂದ ತಲೆತಗ್ಗಿಸಬಾರದೆಂಬ ಒಂದೇ ಕಾರಣದಿಂದ ಎರಡನೆಯ ಶತಮಾನಕ್ಕೇ ನಿಲ್ಲಿಸಿದ್ದಾರೆ."
ಇದು ತಮಿಳರ ತಮ್ಮ ಭಾಷೆಯ ಬಗೆಗಿನ ವಿಚಾರದ ಒಂದು ಸ್ಥೂಲ ನಿರೂಪಣೆ. ತಮಿಳರ ಅತಿರೇಕಗಳನ್ನು ಪುಸ್ತಕದ ಸುಮಾರು ಇನ್ನೂರು ಪುಟಗಳವರೆಗೂ ಸ್ವಾಮಿಯವರು ವರ್ಣಿಸಿದ್ದಾರೆ. ಎಷ್ಟು ಹಾಸ್ಯ ತುಂಬಿದೆಯೆಂದರೆ ನನಗಂತೂ ನಕ್ಕು ನಕ್ಕು ಹೊಟ್ಟೆ ನೋವು ಬಂದಿತು (ಇದು ತೀರಾ ಸಾಮಾನ್ಯದ ಕ್ಲೀಷೆಯಾದರೂ ಈ ಪುಸ್ತಕಕ್ಕೆ ಸರಿಯಾಗಿ ಹೊಂದುತ್ತದೆ). ಪಾಪ, ಅವರು ಅನುಭವಿಸಿದ ಅನನುಕೂಲಗಳು ಮತ್ತು ಯಾತನೆಗಳನ್ನು ನೆನೆಸಿಕೊಂಡರೆ ಅಯ್ಯೋ ಎನ್ನಿಸದೇ ಇರುವುದಿಲ್ಲ.

ಹಾಸ್ಯದ ಜೊತೆಗೆ ತಮಿಳು ಸಾಹಿತ್ಯ ಮತ್ತು ಅದರ ಬಗೆಗಿನ ಸಂಶೋಧನೆಯ ಬಗ್ಗೆ ಒಂದು ಸ್ಥೂಲ ಪರಿಚಯ ಈ ಪುಸ್ತಕದಿಂದ ದೊರೆಯುತ್ತದೆ. ಚಂಗ ಸಾಹಿತ್ಯದ ವಿಂಗಡಣೆಯ ಬಗೆ. ಶಿಲಪ್ಪದಿಕಾರಂ ನ ಸ್ಥಾನ. ತಮಿಳರ ಲೆಮ್ಯೂರಿಯಾ ಅಥವಾ ಕುಮಾರಿಖಂಡದ ದಂತಕಥೆಯ ನಿರೂಪಣೆ. ತಮಿಳರಿಗೆ ತಮ್ಮ ಭಾಷೆಯ ಬಗ್ಗೆ ಇರುವ ಅತಿಯಾದ ಪ್ರೇಮ. "ತಮಿಳ್ ಇಸೈ" (ತಮಿಳು ಸಂಗೀತ)ನ ಬಗ್ಗೆ ಒಂದಷ್ಟು ಮಾಹಿತಿ. ತಮಿಳನ್ನು ಬಿಟ್ಟು ಬೇರೇನೂ ಬೇಡ ಅನ್ನುವ ವೀರತಮಿಳರ ಹಠ. ಅಲ್ಲಿನ ರಾಜ್ಯ ಸರ್ಕಾರ ತಮಿಳಿನ ಬಗ್ಗೆ ತೋರುವ ಒಲವು - ಗ್ರಂಥಗಳನ್ನು ಬದಲಾಯಿಸಿ ಸಂಶೋಧನೆಯ ದಿಕ್ಕನ್ನು ತಿರುಗಿಸುವ ಪ್ರಯತ್ನ. ತಿರುಕ್ಕುರಲಿನ ಬಗ್ಗೆಯ ಸಂಶೋಧನೆ. ತಮಿಳು ಹೇಗೆ ಬೇರೆ ದ್ರಾವಿಡ ಭಾಷೆಗಳ ಸಮವೇ ಆಗಿದೆ (ತಮಿಳೇತರ ಸಂಶೋಧಕರ ಪ್ರಕಾರ) ಎಂಬ ವಿಚಾರ. ಶೈಕ್ಷಣಿಕ ಕ್ಷೇತ್ರದಲ್ಲಿ ಹೇಗೆ ತಮಿಳನ್ನು ಕ್ರಮವಾಗಿ ತಂದು "ಆರ್ಯ" ಮತ್ತು "ಬ್ರಾಹ್ಮಣ" ಧರ್ಮಗಳ ಬಗ್ಗೆ ತಪ್ಪು ವಿಚಾರವನ್ನು ಹರಡುತಿದ್ದಾರೆಂಬುದರ ಬಗ್ಗೆ. ತಮಿಳೇತರ ಕ್ಷೇತ್ರಗಳಲ್ಲಿಯೂ ತಮಿಳು ಸಂಸ್ಕೃತಿಯನ್ನು ಬಿಡಬಾರದೆಂಬುದರ ಬಗ್ಗೆ ಸರ್ಕಾರದ ಕಟ್ಟಾಜ್ಞೆಯ ಬಗ್ಗೆ. ಹೇಗೆ ಚರ್ವಿತಚರ್ವಣವಾಗಿರುವ ವಿಷಯಗಳನ್ನೇ ಆಧರಿಸಿ ಇಂದಿಗೂ ವಿದ್ಯಾರ್ಥಿಗಳು ಪಿ.ಎಚ್.ಡಿಯನ್ನು ಪಡೆಯುತ್ತಾರೆಂಬುದರ ಬಗ್ಗೆ. ಇವೆಲ್ಲದರ ಮಧ್ಯೆ ಸರಿಯಾದ ರೀತಿಯಲ್ಲಿ ಸಂಶೋಧನೆ ನಡೆದಿಲ್ಲವಲ್ಲಾ ಎಂಬ ಸ್ವಾಮಿಯರ ಅವ್ಯಕ್ತ ಖೇದ. ಇವೇ ಮೊದಲಾದ ಸಂಗತಿಗಳನ್ನು ಈ ಪುಸ್ತಕ ಹೊಂದಿದೆ.

ಹೀಗೆ ನೋಡಿದಾಗ ಮೊದಲು ನನಗನ್ನಿಸಿದ್ದು - ನಾನು ಕನ್ನಡಿಗನಾಗಿ ಹುಟ್ಟಿದ್ದು ನನ್ನ ಪುಣ್ಯವೆಂದು. ನಮಗೆ ಕಣ್ಣು ಕಾಣುವುದೇ ಸ್ವಲ್ಪವಾಗಿದ್ದಾಗ ಅದರ ಮೇಲೆ ಮತಾಂಧತೆ, ಭಾಷಾಂಧತೆ ಮುಂತಾದ ಅಂಧತೆಗಳೂ ಸೇರಿದರೆ ಲೋಕವೇ ಕಾಣದೆ ಹೋಗುವುದಿಲ್ಲವೇ? ಕನ್ನಡಿಗರು ನಿರಭಿಮಾನಿಗಳು ಎಂದು ಹಿಂದೆ ಈ ಬ್ಲಾಗಿನಲ್ಲಿಯೇ ಬರೆದಿದ್ದೇನೆ. ಆದರೆ ತಮಿಳರ ಈ ರೀತಿಯ ಸತ್ಯದ ತಲೆಯ ಮೇಲೆ ಹೊಡೆದ ಹಾಗಿರುವ ಬರೇ ಸುಳ್ಳಿನ ಅಡಿಪಾಯದ ಮೇಲೆ ನಿಂತಿರುವ ದುರಭಿಮಾನ ನಮಗೆಂದಿಗೂ ಬರುವುದಿಲ್ಲವೆಂದು ಹೆಮ್ಮ ಕೂಡ ಆಯ್ತು. ಇದ್ದದ್ದನ್ನು ಇದ್ದ ಹಾಗೆ ಹೇಳಿದರೂ ಕನ್ನಡಿಗರ ಸಮಯಪ್ರಜ್ಞೆ ಮತ್ತು ಮನೋವೈಶಾಲ್ಯ ನಮ್ಮನ್ನು ಕಾಪಾಡುತ್ತದೆ ಎಂದು ಅನ್ನಿಸಿತು. ಇದರ ಬಗ್ಗೆ ಒಂದು ಸಂಗತಿಯನ್ನು ಸ್ವಾಮಿ ನಿರೂಪಿಸುತ್ತಾರೆ. ಒಮ್ಮೆ ಬೀ.ಎಂ.ಶ್ರೀಕಂಠಯ್ಯನವರು ತಮಿಳಿನ ಬಗ್ಗೆ ಭಾವೋದ್ವೇಗಕ್ಕೆ ಒಳಗಾಗಿ "ಕನ್ನಡದಲ್ಲೇನಿದೆ ಮಣ್ಣು" ಅನ್ನುವ ಹಾಗೆ ಹೇಳಿದರು. ಇದನ್ನು ಕೇಳಿದ್ದ ಸಭಿಕರೆಲ್ಲರೂ ಕನ್ನಡಿಗರೇ. ಆದರೆ ಯಾವ ಸಂದರ್ಭದಲ್ಲಿ ಶ್ರೀಕಂಠಯ್ಯನವರು ಹೀಗೆ ಮಾತನಾಡಿದರು ಎಂದು ತಿಳಿದಿದ್ದರು. ಅದಕ್ಕೆ ಸಭೆಯಲ್ಲಿ ನಡೆದ ಅಚಾತುರ್ಯವೆಂದರೆ ಶ್ರೀಯವರ ಆರ್ಭಟ ಮಾತ್ರ. ಕನ್ನಡಿಗರದು ನಿರಭಿಮಾನವೆಂದು ಹೇಳಬಹುದು. ಆದರೆ ತಮಿಳರ ದುರಭಿಮಾನವನ್ನು ತಿಳಿಯಲು ಈ ಪುಸ್ತಕವನ್ನೋದಿ. ನಿಮಗೇ ಅನ್ನಿಸುತ್ತದೆ - ನಮ್ಮದು ಹಾಗಾಗುವುದೇ ಬೇಡಪ್ಪಾ ಎಂದು!

ತಮಿಳಿನ ಪ್ರಚಾರದ ಬಗ್ಗೆ ಈ ಪುಸ್ತಕದಲ್ಲಿ ಓದಿದಾಗ ನನಗೆ ಕಮ್ಯೂನಿಸ್ಟ್ ರಷ್ಯಾ, ಚೈನಾ ಮತ್ತು ತಾಲಿಬಾನ್ ಗಳ ನೆನಪಾಯ್ತು. ಕಮ್ಯೂನಿಷ್ಟರು ತಮ್ಮ ಸಿದ್ಧಾಂತಕ್ಕೆ ಎಂದೂ ಕುಂದು ಬರಬಾರದೆಂದು ಹಾರಾಡಿದ್ದವರು. ಸಿದ್ಧಾಂತಕ್ಕೆ ವಿರುದ್ಧ ಬರೆದವರನ್ನು ಸೆರೆಮನೆಗೆ ತಳ್ಳಿದವರು. ತಮ್ಮದು ಎಷ್ಟೇ ತಪ್ಪಿದ್ದರೂ ಒಪ್ಪದಿರುವ ಭಂಡರು. ಕಟ್ಟಾ ಇಸ್ಲಾಮಿಗಳ ಕಥೆಯೂ ಅದೆ. ಮೊನ್ನೆ ಆದ ಪ್ರವಾದಿ ಮಹಮ್ಮದರ ಕಾರ್ಟೂನಿನ ರಾದ್ಧಾಂತ ನಮಗೆ ತಿಳಿಯದೇ? ಇದಕ್ಕೇನೂ ಕಡಿಮೆಯಿಲ್ಲದ್ದು ತಮಿಳರ ಭಾಷಾಪ್ರೇಮ.

ವೀರತಮಿಳರ ವಿಚಾರಲಹರಿಯನ್ನವಲಂಬಿಸದೆ ಬೇರೆಯ ವಿಚಾರವನ್ನು ಬರೆದ ಗೋವಿಂದನ್ ಎಂಬವರ ಪುಸ್ತಕವನ್ನು ಕೊಳ್ಳಬಾರದೆಂಬ ಆಗ್ರಹ ಮಾಡಿದರು ತಮಿಳು ವಾದ್ಯಾರರು. ಒಬ್ಬಿಬ್ಬರು "ತಮಿಳುನಾಡಿನಲ್ಲಿ ಕಾಲಿಟ್ಟೀಯೆ ಜೋಕೆ" ಎಂದು ಪತ್ರಗಳನ್ನೂ ಬರೆದರು. ತಮ್ಮ ಭಾಷೆಯ ಬಗ್ಗೆ (ಅದು ಭಾಷೆಯ ಬಗ್ಗೆಯೂ ಅಲ್ಲ - ಅದರ ಕಾಲದ ಬಗ್ಗೆ) ಐನೂರು ವರ್ಷ ಈಚಿನದು ಎಂದು ಬರೆದವರನ್ನು ಖಂಡಿಸಲು - ಚಿಂಬೋಚಿಯಮ್ (symposium) ಗಳನ್ನು ಏರ್ಪಡಿಸಿ ಖಂಡನೆಯ ಠರಾವುಗಳನ್ನು ಹೊರಡಿಸುವ ರೀತಿ ಇವರದು - ಅದೂ ಪುಸ್ತಕವನ್ನು ಅಥವಾ ಲೇಖನವನ್ನು ಓದದೆಯೇ!! ಹಳೆಯದ್ದಾದಷ್ಟೂ ಒಳ್ಳೆಯದು ಎಂಬುದು ಇವರ ನಂಬಿಕೆ. ಕಾಲಿದಾಸನ "ಪುರಾಣಮಿತ್ಯೇವ ನ ಸಾಧು ಸರ್ವಮ್" ಎಂಬ ಕಿವಿಮಾತು ಬೇರೆ ಭಾಷೆಗಳ ಬಗ್ಗೆ ಹತ್ತಿಯನ್ನು ತುಂಬಿಕೊಂಡ ಕಿವಿಗಳನ್ನುಳ್ಳ ಈ ತಮಿಳರ ಕಿವಿಯನ್ನು ಹೇಗೆ ತಾನೆ ಸೇರೀತು? ಋಗ್ವೇದವನ್ನು ಓದುವಷ್ಟು ಸಂಸ್ಕೃತ ತಿಳಿಯದ "ವಿದ್ವಾ(ಧ್ವ?)೦ಸ"ನ ಅಂಬೋಣ ಏನು ಗೊತ್ತೇ ? ಋಗ್ವೇದವು ತಮಿಳರು ರಚಿಸಿದ ಪಂಚಾಂಗವಂತೆ!! ಇದನ್ನು ನಂಬುವ ಜನರೂ ಇದ್ದಾರಲ್ಲ!

ಈಗಿನ ಕಾಲಕ್ಕೆ ಬಂದಾಗ ತಮಿಳಿಗೆ ಶಾಸ್ತ್ರೀಯ ಸ್ಥಾನದ ಬಗ್ಗೆ ನಡೆದ ತಕರಾರು ನೆನಪಿಗೆ ಬರಬಹುದು. ಅವೆಲ್ಲಕ್ಕೂ ಸ್ಫೂರ್ತಿ ಇವರಿಗೆ ಎಲ್ಲಿಂದ ದೊರೆಯಿತು ಎಂದು ನೋಡಲು ಈ ಪುಸ್ತಕವನ್ನು ಓದಿಯೇ ಓದಬೇಕು.

ಭಾಷೆಯ ಬಗ್ಗೆಯ ಈ ದುರಭಿಮಾನ ಅತಿರೇಕಕ್ಕೆ ಹೋಗಿ ಅಪಾಯಕ್ಕೆ ಕಾರಣವಾಗಬಹುದು. "ತಮಿಳರು ಭಾರತದಾದ್ಯಂತ ಇದ್ದ ಆದಿವಾಸಿಗಳು. ಇವರನ್ನು ದಕ್ಷಿಣಕ್ಕೆ ಓಡಿಸಿದ್ದು ಬೇರೆಯ ಕಡೆಯಿಂದ ಬಂದ ಆರ್ಯರು" ಎಂಬ ಕಟ್ಟುಕತೆಯನ್ನು ಪರಮಸತ್ಯವೆಂದು ತಮಿಳುನಾಡಿನಲ್ಲಿ ಇಂದಿಗೂ ಪಾಠಹೇಳುತ್ತಾರಂತೆ. ಕಲಪ್ಪಿರರು (ಕಳಭ್ರರು) ಎಂಬ ಆರ್ಯ ರಾಜರು ಹೇಗೆ ತಮಿಳನ್ನು ತುಳಿದು ಹಾಳುಗೆಡವಿದರು ಎಂದೆಲ್ಲ ಇಲ್ಲಸಲ್ಲದ್ದು ಹೇಳಿ ಮಕ್ಕಳ ಮನಸ್ಸಿನಲ್ಲಿ ಬೇರೆ ಸಂಸ್ಕೃತಿಗಳ ಬಗ್ಗೆ ವಿಷದ ಬೀಜ ಬಿತ್ತುವ ಇವರ ದುರ್ಬುದ್ಧಿಗೂ, ಮದರಸಾಗಳಲ್ಲಿ ನಡೆಯುವ ಕ್ರಮವಾದ brainwashಗೂ ಏನು ವ್ಯತ್ಯಾಸ? ಎರಡೂ ಕಡೆ ಹಗೆಯೇ! ಎರಡು ಕಡೆ "ನಮ್ಮನ್ನು ಇನ್ನೊಬ್ಬರು ಹಾಳು ಮಾಡಿದರು. ನಮ್ಮ ಈ ದುಃಸ್ಥಿತಿಗೆ ಕಾರಣರು ಬೇರೆಯವರು" ಎಂಬ ಮಹಾ ಅಪಾಯಕಾರಿ ವಿಷ ತುಂಬುತ್ತಿದ್ದಾರೆ. ಎರಡೂ ಕಡೆ ಇದಕ್ಕೆ ಸರ್ಕಾರ ಕುಮ್ಮಕ್ಕು ಕೊಟ್ಟಿದೆ. ಇದು ರಾಜಕೀಯವ್ಯಕ್ತಿಗಳಿಗೆ ಸುಗ್ಗಿಯ ಹಾಗೆ. ತಮಗೆ ತೋಚಿದಾಗ ತಮಗೆ ತೋಚಿದ ರೀತಿಯಲ್ಲಿ ವಿಷಯವನ್ನು ಅಡ್ಡಾದಿಡ್ದಿ ಎಳೆದು ಲಾಭಮಾಡಿಕೊಳ್ಳುವುದರಲ್ಲಿ ನಿಸ್ಸೀಮರಲ್ಲವೇ ಇವರು?
ಒಟ್ಟಿನಲ್ಲಿ ಈ ಪುಸ್ತಕದಿಂದ ಮನೋರಂಜನೆಯ ಜೊತೆಗೆ ನನಗೆ ದೊರೆತ ದೊಡ್ಡ ಪಾಠವೆಂದರೆ - ಮನಸ್ಸು-ಬುದ್ಧಿಗಳನ್ನು ಆದಷ್ಟೂ ಮುಕ್ತವಾಗಿ (open) ಇಡಬೇಕೆಂಬುದು. ಅದಿಲ್ಲದಿದ್ದರೆ ಏನಾಗುವುದೆಂದು ತಿಳಿಯಲು ಈ ಪುಸ್ತಕವನ್ನೋದಿ.

|| ಇತಿ ಶಮ್ ||

Tuesday, May 02, 2006

ಶ್ರೀಶಂಕರಜಯಂತಿ

ಶ್ರುತಿ-ಸ್ಮೃತಿ-ಪುರಾಣಾನಾಮಾಲಯಂ ಕರುಣಾಲಯಮ್ |
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಮ್ ||

ವೈಶಾಖ-ಶುದ್ಧ-ಪಂಚಮಿಯಂದು ಶಂಕರಾಚಾರ್ಯರ ಜಯಂತಿ ಆಚರಿಸುವುದು. ಈ ವರ್ಷ ಅದು ಇಂದಿನ ದಿನ ಬಂದಿದೆ.

ಶ್ರೀಶಂಕರಾಚಾರ್ಯರಷ್ಟು ಪ್ರಭಾವಶಾಲಿ ದಾರ್ಶನಿಕರು ಭಾರತದಲ್ಲಿ ಮತ್ತೊಬ್ಬರಿಲ್ಲ. ಅವರನ್ನು ಒಪ್ಪಲಿ ಬಿಡಲಿ, ಅವರು ಹಾಕಿಕೊಟ್ಟ ಮಾರ್ಗವನ್ನೇ ನಂತರದ ದಾರ್ಶನಿಕರಾದ ರಾಮಾನುಜಾಚಾರ್ಯರು ಮಧ್ವಾಚಾರ್ಯರೂ ಅವಲಂಬಿಸಿದರು. ಪ್ರಸ್ಥಾನತ್ರಯಗಳಾದ ಬ್ರಹ್ಮಸೂತ್ರ-ಉಪನಿಷತ್ತು-ಭಗವದ್ಗೀತೆಗಳಿಗೆ ಭಾಷ್ಯ ಬರೆಯುವ ಕ್ರಮವನ್ನು ತೋರಿಸಿದ್ದೇ ಶಂಕರಾಚಾರ್ಯರು. ಇವರು ಪ್ರತಿಪಾದಿಸಿದ್ದು ಅದ್ವೈತವಾದವೆಂದು ಖ್ಯಾತವಾಯ್ತು. ಆದರೆ ತಮ್ಮನ್ನು ತಾವು ಉಪನಿಷದ್ವಾದಿಗಳೆಂದೂ ಔಪನಿಷದರೆಂದು ತಮ್ಮನ್ನು ತಾವೇ ಬಗೆದಿದ್ದರು. ಅದ್ವೈತಿಗೆಳೆಂದು ತಮ್ಮನ್ನು ಎಲ್ಲಿಯೂ ಕರೆದುಕೊಂಡಿಲ್ಲ. ಶಂಕರರು ಮಠಸ್ಥಾಪನೆಯನ್ನು ಮಾಡಿ ಭಾರತದ ಎಲ್ಲೆಗಳನ್ನು ನಿರೂಪಿಸಿದರೆಂದು ಎಲ್ಲರ ನಂಬಿಕೆ. ಇದರಿಂದ ಭಾರತ ಎಂಬ ಒಂದು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರದೇಶದ ಸಮ್ಯಗ್ನಿರೂಪಣೆಯಾಯ್ತೆಂದರೆ ಅತಿಶಯೋಕ್ತಿಯೇನಲ್ಲ.

ಭಾಷ್ಯಗಳನ್ನೇ ಪ್ರಮುಖವಾಗಿ ಬರೆದರೂ ಸಾಮಾನ್ಯರಿಗೆ ಮತ್ತು ಮಂದಾಧಿಕಾರಿಗಳಿಗೆ ಉಪಯೋಗವಾಗಲೆಂದು ಹಲವು ಲಘು ಪ್ರಕರಣಗ್ರಂಥಗಳನ್ನೂ ರಚಿಸಿದ್ದಾರೆಂದು ಪ್ರತೀತಿ. ಇವರದೆಂದು ಹೇಳಲ್ಪಟ್ಟ ಸ್ತೋತ್ರಗಳು (ಸೌಂದರ್ಯಲಹರೀ, ಶಿವಾನಂದಲಹರೀ ಮೊದಲಾದವು) ಇವರವಲ್ಲವೆಂಬುದು ಆಧುನಿಕ ವಿದ್ವಾಂಸರ ಮತ. ನನ್ನ ವೈಯಕ್ತಿಕ ದೃಷ್ಟಿಯೂ ಹಾಗೆ ಇದೆ. ಶಂಕರರ ಹೆಸರನ್ನುಪಯೋಗಿಸಿ ತಮ್ಮ ಕೃತಿಗಳನ್ನು ಪ್ರಚುರಪಡಿಸಬೇಕೆಂಬ ಆಸೆಯೊಂದಿಗೆ ಕಾಲಾಂತರದಲ್ಲಿ ಬಂದ ಕವಿಗಳು ಮಾಡಿದ ಕೃತ್ಯಗಳಿವೆಂಬುದನ್ನು ಹೇಳಬಹುದು.

ಆದರೆ ಶಂಕರರು ಎಷ್ಟು ಪ್ರಭಾವಶಾಲಿಗಳೋ ಅವರ ಹೆಸರು ಅಷ್ಟೇ ವಿವಾದಗಳಲ್ಲಿ ದುರದೃಷ್ಟವಶಾತ್ ಕೇಳುತ್ತದೆ. ಶೃಂಗೇರಿ ಮತ್ತು ಕಾಂಚೀಪುರದ ಮಠಗಳ ನಡುವಿನ ತಗಾದೆ ಬಹಳ ದೊಡ್ಡದು. ಇದಕ್ಕೆ ಅಂಗವಾಗಿ ಶಂಕರರ ಕಾಲವನ್ನು ಕ್ರಿ.ಪೂ ಆರನೆ ಶತಮಾನಕ್ಕೆ ತಳ್ಳಲು ಇತಿಹಾಸಜ್ಞ(ಘ್ನ?)ರ ಗುಂಪು ಯತ್ನಿಸಿದೆ. ಸಾಮಾನ್ಯವಾಗಿ ಕ್ರಿ.ಶ.ಏಳನೇ ಶತಮಾನದವರೆಂದು ಪರಿಗಣಿಸಲಾದ ಆಚಾರ್ಯರರ ಕಾಲವನ್ನು ಒಂದು ಸಾವಿರವರ್ಷಗಳ ಹಿಂದೆ ತಳ್ಳುವ ಸ್ವಾರ್ಥಿಗಳ ಯತ್ನ ನಡೆದಿದೆ. ಇದರ ಬಗ್ಗೆ ನಂತರದ ಒಂದು ಬ್ಲಾಗಿನಲ್ಲಿ ಬರೆಯುತ್ತೇನೆ. ಒಟ್ಟಿನಲ್ಲಿ ಕಾಂಚೀಪುರದ ಅಥವಾ ಕುಂಭಕೋಣದ ಮಠದ ಶಂಕರಾಚಾರ್ಯರ ಕ್ರಿ.ಪೂ.ಕಾಲದ ಮತ ಸತ್ಯಕ್ಕೆ ಸಾವಿರವರ್ಷ ದೂರವೆಂದು ಹೇಳಿ ಇದರ ಬಗ್ಗೆ ಇಲ್ಲಿಯೇ ನಿಲ್ಲಿಸುತ್ತೇನೆ.

ಶಂಕರರು ಭಾರತೀಯ ದಾರ್ಶನಿಕತೆಯ ದಿಗ್ಗಜರಲ್ಲಿ ಒಬ್ಬರು. ಅವರು ಹೇಳಿದ ಕೆಲವು ಸಂಗತಿಗಳನ್ನು ಇಲ್ಲಿ ಸ್ಮರಿಸಬಹುದು.

ಭಗವದ್ಗೀತೆಯ ಬಗ್ಗೆ - "ಸಮಸ್ತವೇದಾಂತಾರ್ಥ-ಸಾರ-ಸಂಗ್ರಹಭೂತಂ ದುರ್ವಿಜ್ಞೇಯಾರ್ಥಮ್"
ಗೀತೆಯು ಸಮಸ್ತ ವೇದಾಂತದ ಅರ್ಥದ ಸಾರಸಂಗ್ರಹಭೂತವಾದರೂ ಇದರ ಅರ್ಥ ತಿಳಿಯುವುದು ಕಷ್ಟ.

"ಸರ್ವಶಾಸ್ತ್ರವಿದ್-ಅಸಂಪ್ರದಾಯವಿತ್-ಮೂರ್ಖವದುಪೇಕ್ಷಣೀಯಃ"
ಎಲ್ಲ ಶಾಸ್ತ್ರಗಳನ್ನು ಬಲ್ಲವನಾದರೂ ಸಂಪ್ರದಾಯದ ಅರ್ಥ-ಮರ್ಯಾದೆಗಳನ್ನು ತಿಳಿಯದವನನ್ನು ಮೂರ್ಖನಂತೆ ಉಪೇಕ್ಷೆ ಮಾಡಬೇಕು.

ಇವರು ಹೇಳಿದ ಮತ್ತೊಂದು ದೊಡ್ಡ ಸಂಗತಿಯೆಂದರೆ - ವೇದಾಧಿಕಾರ ಮತ್ತು ಮೋಕ್ಷಾಧಿಕಾರಗಳನ್ನು ಬೇರ್ಪಡಿಸಿ - ಸ್ತ್ರೀಯರಾಗಲಿ, ಶೂದ್ರರಾಗಲಿ ಸಮಾಜದ ಯಾವುದೇ ಸ್ತರದವರಾದರೂ ಅವರಿಗೆ ಮೋಕ್ಷಕ್ಕೆ ಅಧಿಕಾರವಿದೆ. ಮೋಕ್ಷಾಧಿಕಾರಕ್ಕೂ ವೇದಾಧಿಕಾರಕ್ಕೂ ಸಂಬಂಧವಿಲ್ಲ. ಇದು ಆಗಿನ ಎಂಥ ಒಂದು ಕ್ರಾಂತಿಕಾರಕ ಮಾತೆಂದು ತೋರಬಹುದು. ಆದರೆ ವಸ್ತುತಃ ಉಪನಿಷತ್ತುಗಳ ಸಂಪ್ರದಾಯದಲ್ಲಿ ಮೋಕ್ಷಕ್ಕೆ ಅಧಿಕಾರ ಎಲ್ಲರಿಗೂ ಇದ್ದಿತು. ಬ್ರಾಹ್ಮಣರ ದಬ್ಬಾಳಿಕೆ ಎಂದೆಲ್ಲಾ ಹೇಳುವವರು ಪರಮ-ಪುರುಷಾರ್ಥವಾದ ಮೋಕ್ಷಕ್ಕೆ ಎಲ್ಲರಿಗೂ ಅಧಿಕಾರವನ್ನು ಶಾಸ್ತ್ರ ಮೊದಲೇ ನೀಡಿದೆ - ಎಂದು ಗಮನಿಸಬೇಕು. ಅಂಥವರ ಹೋರಾಟ ಇದನ್ನು ತಿಳಿದ ಬಳಿಕೆ ಸ್ವಲ್ಪವಾದರೂ ಕಡಿಮೆಯಾಗಬಹುದು ಅಲ್ಲವೇ?

ಇವರ ಇನ್ನೊಂದು ಧೀರವಾಕ್ಯ ಹೀಗಿದೆ - "ನೂರು ಶ್ರುತಿಗಳು ಬೆಂಕಿ ತಣ್ಣಗಿದೆಯೆಂದು ಹೇಳಿದರೂ ಅದರಿಂದ ಬೆಂಕಿ ತಣ್ಣಗಾಗುವುದಿಲ್ಲ". ಇಲ್ಲಿನ ಸ್ವಾರಸ್ಯ ಗಮನಿಸಲು ಶ್ರುತಿಪ್ರಾಮಾಣ್ಯದ ಬಗ್ಗೆ ತಿಳಿಯಬೇಕು. ಶಂಕರರು ಅನುಭವದ ಪಾರಮ್ಯವನ್ನೇ ಹಿಡಿದವರು. ಇದರ ಜೊತೆಗೆ - ಮುಕ್ತಿ ಜೀವನಾನಂತರ ಕಾಣುವ ಒಂದಾನೊಂದು ಅವಸ್ಥೆಯಲ್ಲ - ಈ ಜೀವನದಲ್ಲೇ ಮುಕ್ತಿ ಸಾಧ್ಯ - ಅದೇ ಜೀವನ್ಮುಕ್ತಿಯೆಂದು ಸಾರಿದರು.

ಶಂಕರರನ್ನು ಈಗಿನ ಕಾಲದವರು ಪಟದಲ್ಲಿರಿಸಿ ಪೂಜೆ ಮಾಡುತ್ತೇವೆ. ಅವರು ಏನು ಹೇಳಿದ್ದಾರೆಂಬುದರ ಕಡೆಗೆ ಗಮನ ಹರಿಸುವುದಿಲ್ಲ. ಅವರ ಮೂರ್ತಿಗೆ ರುದ್ರಾಭಿಷೇಕ ಮಾಡಿ ಹೂವೇರಿಸುವುದಕ್ಕಿಂತ ಅವರು ಹೇಳಿದ ವಿಚಾರದೆಡೆ ಗಮನ ಹರಿಸುವುದೇ ಅವರಿಗೆ ನಾವು ಮಾಡಬಹುದಾದ ನಿಜವಾದ ಪೂಜೆಯೆಂದು ನನ್ನ ವಿಚಾರ.

|| ಇತಿ ಶಮ್ ||

Thursday, April 27, 2006

101 Dumbest moments in Business - 2005

101 Dumbest Moments in Business - January 01, 2006

This is a hilarious collection! Try this one for instance -

61 Farting shoes? What's not to like?

Florida-based Goosebumps Products, a maker of gel-filled shoe
inserts, sues supplier Bell Chem Corp., claiming that, by delivering
the wrong chemical, it had caused bubbles to form in the insoles that
emit "a flatulence-like noise" with each step. Goosebumps is forced to
dispose of at least 35,000 pairs and soon goes out of business.

And this -
83 The guy is falling! The guy is falling!

In November, parents and children attending a showing of Chicken
Little at AMC's Empire 25 in Manhattan instead get treated to Andrea, a
Spanish film that opens with a young man hanging himself from a tree.
Managers give audience members a refund or a coupon for a free movie.

Really funny!

Wednesday, April 26, 2006

Plug for Performancing

I am using performancing for firefox.

Performancing is a firefox extension which is a cool WYSIWYG editor and a lot more. I see that is a really cool tool for blogging and I would ask all of you to check it out. It comes with support for various services like blogger, wordpress and technorati.